ಮಡಿಕೇರಿ: ಜಿಲ್ಲೆಯ ಹಲವೆಡೆ ಅಂಗಡಿ- ಮುಂಗಟ್ಟುಗಳ ನಾಮಫಲಕದಲ್ಲಿ ಇತರ ಭಾಷೆಗಳಿಗೆ ಆದ್ಯತೆ ನೀಡಿ ರಾಜ್ಯದ ಆಡಳಿತ ಭಾಷೆಯಾಗಿರುವ ಕನ್ನಡವನ್ನು ನಿರ್ಲಕ್ಷ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ವ್ಯಾಪ್ತಿಗೊಳಪಡುವ ಪ್ರತಿಯೊಂದು ಅಂಗಡಿ ಮುಂಗಟ್ಟುಗಳು, ಹೋಟೆಲ್ಗಳು, ಸಂಘ ಸಂಸ್ಥೆಗಳು, ಹೋಂ ಸ್ಟೇಗಳು, ಪ್ರವಾಸಿ ತಾಣಗಳು ಸೇರಿದಂತೆ ಎಲ್ಲಾ ಸರ್ಕಾರಿ ಖಾಸಗಿ ಸಂಸ್ಥೆಯ ನಾಮಫಲಕಗಳು ಕನ್ನಡದಲ್ಲಿ ಕಡ್ಡಾಯವಾಗಿ ಬರೆಸಬೇಕೆಂದು ಎಂದು ಅವರು ನಿರ್ದೇಶನ ನೀಡಿದ್ದಾರೆ.
ಅಂಗಡಿಗಳು ಮತ್ತು ವಾಣಿಜ್ಯ ಕಾರ್ಯ ಸಂಸ್ಥೆಗಳ ಅಧಿನಿಯಮ 2008ರ 24 ಎ ನಾಮಫಲಕಗಳ ಪ್ರದರ್ಶನದ ನಿಯಮದಂತೆ ರಾಜ್ಯದ ಆಡಳಿತ ಭಾಷೆಯಾಗಿರುವ ಕನ್ನಡವನ್ನೇ ನಾಮಫಲಕದಲ್ಲಿ ಬಳಸಬೇಕು. ಇತರೆ ಭಾಷೆ ಬಳಸಬೇಕಾದ ಸಂದರ್ಭಗಳಲ್ಲಿ ಈ ಪದಗಳು ಕನ್ನಡ ಶಬ್ದಗಳಿಗಿಂತ ಚಿಕ್ಕದಾಗಿ ಇರಬೇಕು.
ಕನ್ನಡ ನಾಮಫಲಕಗಳನ್ನು ಇತರ ಭಾಷೆಗಿಂತ ಹೆಚ್ಚು ದಪ್ಪವಾಗಿ ಎದ್ದು ಕಾಣುವಂತೆ ಬರೆಸಬೇಕು ಎಂದು ಅವರು ಹೇಳಿದ್ದಾರೆ.ಈ ಬಗ್ಗೆ ತಾತ್ಸಾರ ಮನೋಭಾವ ತೋರಿದವರಿಗೆ ಸರ್ಕಾರದ ನಿಯಮದಂತೆ ದಂಡವನ್ನು ವಿಧಿಸಲಾಗುತ್ತದೆ.