ಕನಕಗಿರಿ: ವಿದ್ಯಾರ್ಥಿ ಸಮುದಾಯ ವಿದ್ಯೆ ಕಲಿಯುವದರ ಜತೆಗೆ ಉತ್ತಮ ನಾಯಕತ್ವದ ಗುಣಗಳನ್ನು ಶಾಲಾ ಹಂತದಲ್ಲಿಯೆ ಬೆಳಸಿಕೊಳ್ಳಬೇಕೆಂದು ಗಂಗಾವತಿ ಡಿವೈಎಸ್ಪಿ ವಿನ್ಸೆಂಟ್ ಶಾಂತಕುಮಾರ ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗುರುವಾರ ಜಿಲ್ಲಾಡಳಿತ, ಯುನಿಸೆಫ್ ಹಾಗೂ ಪೊಲೀಸ್ ಠಾಣೆಯ ಆಶ್ರಯದಲ್ಲಿ ನಡೆದ ತೆರೆದ ಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಸಂಚಾರಿ ನಿಯಮ ಪಾಲನೆ ಅತಿ ಅವಶ್ಯಕವಾಗಿ ಮಾಡುವುದನ್ನು ಕಲಿತು, ಕಾನೂನ ಜ್ಞಾನ ಹೆಚ್ಚಿನ ರೀತಿಯಲ್ಲಿ ಪಡೆದರೆ ಉತ್ತಮ ನಾಗರಿಕನಾಗಲು ಸಾಧ್ಯವಿದೆ ಎಂದರು.
ಗುರಿಗಳ ಸಾಧನೆಗೆ ಶ್ರಮ, ಆಸಕ್ತಿ ಮುಖ್ಯವಾಗಿದೆ, ಪ್ರತಿಯೊಬ್ಬರು ಉತ್ತಮ ಫಲಿತಾಂಶ ತಂದು ಗ್ರಾಮಕ್ಕೆ ಕೀರ್ತಿ ತರಬೇಕೆಂದು ಕಿವಿ ಮಾತು ಹೇಳಿದರು.
ಸಬ್ ಇನ್ ಸ್ಪೆಕ್ಟರ್ ವೀರಣ್ಣ ಮಾಗಿ ತೆರೆದ ಮನೆ ಕಾರ್ಯಕ್ರಮದ ಮಹತ್ವ ಕುರಿತು ಮಾತನಾಡಿದರು. ಸರ್ಕಾರಿ ನೌಕರರ ಸಂಘದ ನಿರ್ದೇಶಕ ವಿಶ್ವನಾಥ ಮುಟಗಿ, ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮಲ್ಲಿಕಾರ್ಜುನ ಕುಷ್ಟಗಿ, ಶಿಕ್ಷಕರಾದ ನಾಗರತ್ನ ಬೇವೂರು, ನಿರ್ಮಲಾ, ತಿಪ್ಪಯ್ಯ ದೇವೇಂದ್ರಗೌಡ ಉಪ್ಪಳ, ಸಮುದಾಯ ಸಂಘಟಕ ಕರೆಯಪ್ಪ ಕಾಟಾಪುರ ಸೇರಿದಂತೆ ಅನೇಕರು ಇದ್ದರು.
ಸ್ಥಳೀಯ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ನವಲಿ, ವಡಕಿ, ಮಲಕನಮರಡಿ ಆಕಳಕುಂಪಿ ಗ್ರಾಮದ ಶಾಲೆಯ ವಿದ್ಯಾರ್ಥಿಗಳು ವಿವಿಧ ಮಾಹಿತಿ ಪಡೆದುಕೊಂಡರು.