ಕಾರ್ಗಲ್: ಕರ್ನಾಟಕ ವಿದ್ಯುತ್ ನಿಗಮದ ಪ್ರಮುಖ ಜಲ ವಿದ್ಯುತ್ ಸ್ಥಾವರಗಳಲ್ಲಿ ಪ್ರಮುಖವಾದ ಮಹಾತ್ಮಾಗಾಂಧಿ ವಿದ್ಯುತ್ ಉತ್ಪಾದನಾ ನಾಲೆಗೆ ಕುಸಿದು ಬಿದ್ದಿದ್ದ ಗುಡ್ಡದ ಮಣ್ಣು ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದೆ.
ಕಣಿವೆ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗುಡ್ಡದ ಮಣ್ಣು ಇನ್ನಷ್ಟು ಕುಸಿಯುತ್ತಿದೆ. ಕಾಲುವೆಯಿಂದ ಸಾವಿರಾರು ಲಾರಿ ಮಣ್ಣು ಹೊರತೆಗೆದಿದ್ದರೂ ಮತ್ತೆ ಅಷ್ಟೇ ಪ್ರಮಾಣದ ಮಣ್ಣು ನಾಲೆಗೆ ಬಂದು ತುಂಬುತ್ತಿದೆ. ಈಗಾಗಲೇ ಕಲ್ಲು ಮಿಶ್ರಿತ ಕ್ವಾರೆ ಮಣ್ಣನ್ನು ಸುರಿದು, ಜರಿದು ಬರುತ್ತಿರುವ ಮಣ್ಣಿಗೆ ತಡೆಗೋಡೆ ನಿರ್ಮಿಸಲಾಗಿದೆ.
ಆದರೆ, ಸೋಮವಾರ ಕುಸಿದ ಮಣ್ಣು ತಡೆಗೋಡೆಯನ್ನು ತಳ್ಳಿ ನಾಲೆಯ ಮಧ್ಯಭಾಗಕ್ಕೆ ಬಂದಿದೆ. ಮಹಾತ್ಮಾ ಗಾಂಧಿ ಉತ್ಪಾದನಾ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡು 20 ದಿನಗಳೇ ಕಳೆದು ಹೋಗಿವೆ. ದಿನವೊಂದಕ್ಕೆ ಇಲ್ಲಿ 10 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು.
ನಾಲೆಯಲ್ಲಿ ಮಣ್ಣು ಶೇಖರಣೆಗೊಂಡ ಪರಿಣಾಮ ಮಳೆನೀರು ನಿರುಪಯುಕ್ತವಾಗಿ ಹರಿದು ಅರಬಿ ಸಮುದ್ರ ಸೇರುತ್ತಿದೆ. ಇದರಿಂದ ಕೆಪಿಸಿಗೆ ಸಾಕಷ್ಟು ನಷ್ಟವಾಗುತ್ತಿದೆ.