ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಕನ್ನಡ ಜಾತ್ರೆ: ಶಾಸಕ ಪರಿಶೀಲನೆ

Last Updated 16 ಸೆಪ್ಟೆಂಬರ್ 2011, 7:30 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದಲ್ಲಿ 2 ದಿನಗಳ ಕಾಲ ನಡೆಯುವ `ಸಾಹಿತ್ಯ ಜಾತ್ರೆ~ಗೆ ದಿನಗಣನೆ ಶುರುವಾಗಿದ್ದು, ಗುರುವಾರದಿಂದ ಪಟ್ಟಣದ ವಿವಿಧೆಡೆ ಭರದ ಸಿದ್ದತೆ ಸಾಗಿದೆ.

ಸೆ. 17 ಮತ್ತು 18ರಂದು ನಡೆಯಲಿರುವ ~ತಾಲ್ಲೂಕು  ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ಗುರುವಾರದಿಂದ ಸಿದ್ಧತೆ ಜೋರಾಗಿದೆ. ಪಟ್ಟಣಕ್ಕೆ ಆಗಮಿಸುವ ಅತಿಥಿಗಳನ್ನು, ಸಮ್ಮೇಳಾನಧ್ಯಕ್ಷ ಪ್ರೊ. ಸತ್ಯನಾರಾಯಣರಾವ್ ಅಣತಿ ಅವರನ್ನು ಸ್ವಾಗತಿಸಲು ಸಿಂಗಾರಗೊಳ್ಳುತ್ತಿದೆ. ಪಟ್ಟಣದ ಬಿ.ಎಂ. ರಸ್ತೆಯಲ್ಲಿ ಉದ್ದಕ್ಕೂ ಸಮಾರಂಭಕ್ಕೆ ಸ್ವಾಗತ ಕೋರಲು ವಿವಿಧ ಸಂಘ, ಸಂಸ್ಥೆಗಳು ಫ್ಲೆಕ್ಸ್ ಅಳವಡಿಸಿವೆ. ಆಟೋಗಳಿಗೆ ಕನ್ನಡ ಬಾವುಟ ಅಳವಡಿಸಲಾಗಿದೆ. ಗುರುವಾರ ಸಮ್ಮೇಳನದ ಸಿದ್ದತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷರಾದ,  ಶಾಸಕ ಸಿ.ಎಸ್. ಪುಟ್ಟೇಗೌಡ, ಕಸಾಪ ಅಧ್ಯಕ್ಷ ಪ್ರೊ.ಎಚ್. ಸಿದ್ದೇಗೌಡ,  ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ ಪರಿಶೀಲಿಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದರು. ಇಲ್ಲಿನ ಮಾಧ್ಯಮಿಕ ಶಾಲಾ ಆವರಣದಲ್ಲಿ 2500 ಜನ ಕುಳಿತು ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಪೆಂಡಾಲ್ ಹಾಕಲಾಗುತ್ತಿದೆ.

ಇದರ ಎರಡು ಕಡೆ  ವಿವಿಧ ಇಲಾಖೆಗಳಿಂದ 15 ಮಳಿಗೆಗಳನ್ನು ತೆರೆಯಲಾಗುವುದು. ಕೃಷಿ, ತೋಟಗಾರಿಕೆ, ಜಲಾನಯನ, ಹೀಗೆ ಅನೇಕ ಇಲಾಖೆಗಳು ವಸ್ತು ಪ್ರದರ್ಶನ ಏರ್ಪಡಿಸಲಿವೆ. ಆರೋಗ್ಯ ತಪಾಸಣೆ ನಡೆಸಲು ಒಂದು ಕೌಂಟರ್ ತೆರೆಯಲಾಗುವುದು ಎಂದರು.

ಸಾಹಿತ್ಯಾಸಕ್ತರಿಗೆ ನವೋದಯ ಪದವಿಪೂರ್ವ ಕಾಲೇಜಿನಲ್ಲಿ ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ. ಒಟ್ಟು 12 ಕೌಂಟರ್ ತೆರೆಯಲಾಗಿದೆ. ಕುಡಿಯುವ ನೀರು ಸೌಕರ್ಯ ಒದಗಿಸಲಾಗಿದೆ.  ಸಾಹಿತಿಗಳು, 30 ಜಿಲ್ಲೆಗಳ  ಜಿಲ್ಲಾಧ್ಯಕ್ಷರು  ಸಮ್ಮೆಳನಕ್ಕೆ ಆಗಮಿಸಲಿದ್ದಾರೆ.

ಶನಿವಾರ ಬೆಳಿಗ್ಗೆ ಜಾನಪದ ಸೊಗಡು ಸಾರುವ  40 ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಶನಿವಾರದ ಮಧ್ಯಾಹ್ನದ ಊಟಕ್ಕೆ ಕಾಯಿ ಹೊಬ್ಬಟ್ಟನ್ನು ನೀಡಲಾಗುವುದು. ಬುಧವಾರದಿಂದ ಹೇಮಾವತಿ ಒಕ್ಕಲಿಗರ ಮಹಿಳಾ ಸಂಘದ ಸದಸ್ಯರು 5 ಸಾವಿರ ಹೊಬ್ಬಟ್ಟು ತಯಾರಿಸುವ ಕೆಲಸ ಶುರು ಮಾಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಅವರ ತವರೂರಿನಲ್ಲಿ ಇದೇ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಆಯೋಜಿಸಲಾಗುವುದು ಎಂದರು. ಜಿ.ಪಂ. ಸದಸ್ಯ ಎನ್.ಡಿ. ಕಿಶೋರ್, ಸ್ವಾಗತ ಸಮಿತಿ ಸದಸ್ಯ ಪಟೇಲ್ ಮಂಜುನಾಥ್, ರಾಷ್ಟ್ರ ಪರಿಸರ ಪ್ರಶಸ್ತಿ ಪುರಸ್ಕೃತ ಸಿ.ಎನ್. ಅಶೋಕ್, ಕೋಶಾಧ್ಯಕ್ಷ ಎಂ.ಆರ್. ಅನಿಲ್‌ಕುಮಾರ್ ಹಾಜರಿದ್ದರು.

ಸಮ್ಮೇಳನಕ್ಕೆ ದೇಣಿಗೆ: ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ತಾಲ್ಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ.ಎ.ಎಸ್. ಮಂಜುನಾಥ್, ಪದಾಧಿಕಾರಿಗಳಾದ ಡಾ. ವಿ. ಮಹೇಶ್, ಡಾ.ಎ.ಆರ್. ಧನಶೇಖರ್, ಡಾ.ಸಿ.ಕೆ. ವಿಜಯಕುಮಾರ್, ಗುರುವಾರ ಶಾಸಕರಿಗೆ 35 ಸಾವಿರ ರೂ. ನೀಡಿದರು. ಅದೇ ರೀತಿ ರಿಕ್ರಿಯೇಷನ್ ಕ್ಲಬ್‌ವತಿಯಿಂದ  ಪದಾಧಿಕಾರಿಗಳಾದ ಎಚ್.ಎಂ. ನಾಗಪ್ಪ, ಪಟೇಲ್ ಮಂಜುನಾಥ್, 10 ಸಾವಿರ ರೂ. ದೇಣಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT