ಬೆಂಗಳೂರು: ಹೊಸ ಪಕ್ಷ ಕಟ್ಟಲು ತಯಾರಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರದಿಂದ ಮತ್ತೆ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ.
ಮಂಗಳವಾರ, ಬುಧವಾರ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹಾಗೂ ಗುರುವಾರ, ಶುಕ್ರವಾರ ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಭಾನುವಾರ ಕೂಡ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಯಡಿಯೂರಪ್ಪ ತಮ್ಮ ಬೆಂಬಲಿಗರ ಜತೆ ಚರ್ಚೆ ನಡೆಸಿದರು. ಭೇಟಿ ಮಾಡಲು ಬಂದಿದ್ದ ಬಹುತೇಕರು ಉದ್ದೇಶಿತ ಹೊಸ ಪಕ್ಷಕ್ಕೆ ಬೆಂಬಲ ನೀಡುವ ಭರವಸೆ ನೀಡಿದರು ಎನ್ನಲಾಗಿದೆ.
ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ನೇತೃತ್ವ ವಹಿಸಲು ನಿರ್ಧರಿಸಿರುವ ಅವರು ಪಕ್ಷಕ್ಕೆ ತ್ಲ್ಲಾಲೂ ಕು ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ನೇಮಿಸುವ ಸಂಬಂಧ ಆಯಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಚರ್ಚಿಸಲಿದ್ದಾರೆ.
ಬೆಳಗಾವಿ, ಹುಬ್ಬಳ್ಳಿ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ಸಭೆ ಮುಗಿಸಿದ್ದು, ಹಳೇ ಮೈಸೂರು ಪ್ರಾಂತ್ಯದಲ್ಲೂ ಪ್ರವಾಸ ಮಾಡಲಿದ್ದಾರೆ.
ಪಕ್ಷ ಹಸ್ತಾಂತರ: ಕೆಜೆಪಿ ಸ್ಥಾಪಕರಾದ ಪದ್ಮನಾಭ ಪ್ರಸನ್ನ ಅವರ ಜತೆ ಯಡಿಯೂರಪ್ಪ ಮಾತುಕತೆ ನಡೆಸಿದ್ದು, ಒಳ್ಳೆಯ ದಿನ ನೋಡಿ ಪಕ್ಷದ ನೇತೃತ್ವ ವಹಿಸಲಿದ್ದಾರೆ. ಅದಕ್ಕೂ ಮುನ್ನ ಸರಣಿ ಪೂಜೆಗಳು ನಡೆಯುತ್ತವೆ ಎಂದು ಗೊತ್ತಾಗಿದೆ.