ಲಂಡನ್ (ಪಿಟಿಐ): ಇಲ್ಲಿನ ಭಾರತದ ರಾಯಭಾರಿ ಕಚೇರಿಯನ್ನು `ನಿಯಂತ್ರಣವಿಲ್ಲದ~ ಕಚೇರಿ ಹಾಗೂ ಭಾರತದಲ್ಲಿ ಭ್ರಷ್ಟಾಚಾರ ಕೊನೆಗೊಳಿಸುವ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಪಕ್ಷ `ನಿರಾಕರಿಸುತ್ತಿದೆ~ ಎಂದೂ ಸಂಸತ್ತಿನಲ್ಲಿ ಲೇಬರ್ ಪಕ್ಷದ ಸಂಸದ ಬೆರ್ರಿ ಗಾರ್ಡಿನರ್ ಆರೋಪಿಸಿದ್ದಾರೆ.
ಇಂಗ್ಲೆಂಡ್- ಭಾರತ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಇರುವ ಸರ್ವ ಪಕ್ಷಗಳ ತಂಡದ ಅಧ್ಯಕ್ಷರೂ ಆಗಿರುವ ಗಾರ್ಡಿನರ್, ಭ್ರಷ್ಟಾಚಾರ ವಿರೋಧಿಸಿ ಚಳವಳಿ ನಡೆಸುತ್ತಿರುವ ಅಣ್ಣಾ ಹಜಾರೆ ಮತ್ತು ಅವರ ಬೆಂಬಲಿಗರ ಮೇಲೆ `ಉದ್ದೇಶಪೂರ್ವಕವಾಗಿ ಹತಾಶೆಯಿಂದ ದಾಳಿ ನಡೆಸಲಾಗಿದೆ ಮತ್ತು ಹೋರಾಟ ದುರ್ಬಲಗೊಳಿಸಲಾಗಿದೆ~ ಎಂದೂ ದೂರಿದ್ದಾರೆ.
`ಭಾಷಣದಲ್ಲಿ ನಾನು, ಭಾರತವು ತನ್ನ ಅರ್ಥವ್ಯವಸ್ಥೆ ಸುಧಾರಣೆಗೆ ವಿಫಲವಾಗಿರುವುದನ್ನು ಪ್ರಶ್ನಿಸಿದ್ದೇನೆ ಮತ್ತು ಭಾರತದ ರಾಯಭಾರ ಕಚೇರಿಯನ್ನು ನಿಯಂತ್ರಣವಿಲ್ಲದ ಕಚೇರಿ ಎಂದು ಬಣ್ಣಿಸಿದ್ದೇನೆ~ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
`ಜಾಗತಿಕ ವ್ಯಾಪಾರ ಪಾಲುದಾರಿಕೆಯಲ್ಲಿ ಭಾರತವು ಇಂಗ್ಲೆಂಡ್ನ ಸ್ಥಾನವನ್ನು ತಗ್ಗಿಸಿದೆ. ಬುಧವಾರ ಬೆಳಗಿನ ಚರ್ಚೆಯಲ್ಲಿ ಭಾರತದ ರಾಯಭಾರಿ ಕಚೇರಿಯ ಪ್ರತಿನಿಧಿ ಗೈರು ಹಾಜರಾಗಿರುವುದರಿಂದ ಇದು ಸ್ಪಷ್ಟವಾಗಿದೆ~ ಎಂದಿದ್ದಾರೆ.
`ಭಾರತದ ನೈಜ ಮಿತ್ರ~ ಎಂದು ತಮ್ಮನ್ನು ಕರೆದುಕೊಂಡಿರುವ ಅವರು, ಆರ್ಥಿಕ ಬೆಳವಣಿಗೆಗೆ ತನ್ನ ಸಾಮರ್ಥ್ಯವನ್ನು ಪೂರ್ಣ ಬಳಸಿಕೊಳ್ಳಲು ಭಾರತ ವಿಫಲವಾಗಿದೆ ಎಂದಿದ್ದಾರೆ.