ಬೆಂಗಳೂರು: ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 2 ಸಾವಿರ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ಖರೀದಿಸಲು ತಲಾ ₨2ಲಕ್ಷ ಸಹಾಯಧನ ನೀಡಲು ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಒಟ್ಟು ₨40 ಕೋಟಿ ವೆಚ್ಚ ಮಾಡಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯ ಚಂದ್ರ ಸುದ್ದಿಗಾರರಿಗೆ ತಿಳಿಸಿದರು.
ಕಡೂರು ತಾಲ್ಲೂಕಿನ ಜೋಡಿಲಿಂಗದಹಳ್ಳಿ ಮತ್ತು ಮೂಡಿಗೆರೆ ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ₨15.31 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸಂಕೀರ್ಣ ನಿರ್ಮಿಸಲು ತೀರ್ಮಾನಿಸಲಾಗಿದೆ.
*ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ನಿರ್ಮಿಸಿರುವ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ₨ 50 ಕೋಟಿ ವೆಚ್ಚ
*ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅನುಷ್ಠಾನಗೊಳಿಸುವ ಹೊಸ ಕಾರ್ಯಕ್ರಮಗಳಿಗೆ ₨38.76 ಕೋಟಿ ನೆರವು. 114 ಗ್ರಾಮ ಕೈಗಾರಿಕಾ ಘಟಕಗಳಿಗೆ ಸಹಾಯಧನ
*ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕೆ ₨1899.72 ಕೋಟಿ ನೆರವು ಪಡೆಯುವ ಸಂಬಂಧ ಜೈಕಾದೊಂದಿಗೆ ಮಾತುಕತೆ ನಡೆಸಲು ತೀರ್ಮಾನ
*ಪದ್ಮಶ್ರೀ ಶ್ರೇಣಿಯ ಪ್ರಶಸ್ತಿಗಳಿಗೆ ರಾಜ್ಯದಿಂದ ಅರ್ಹರ ಹೆಸರುಗಳನ್ನು ಶಿಫಾರಸು ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ.
*ಗುಲ್ಬರ್ಗದ ಸಿದ್ಧಾರ್ಥ ವಿಹಾರ ಟ್ರಸ್ಟ್ ಅಂತರರಾಷ್ಟ್ರೀಯ ಮಟ್ಟದ ಪಾಳಿ, ಸಂಸ್ಕೃತ ಅಧ್ಯಯನ ಸಂಸ್ಥೆ ಆರಂಭಿಸಲಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ ₨10 ಕೋಟಿ ನೆರವು.