ಮಹದೇವಪುರ: ಕ್ಷೇತ್ರದ ಪ್ರಮುಖ ವೃತ್ತಗಳಲ್ಲಿ ಒಂದಾಗಿರುವ ಓ ಫಾರಂ ವೃತ್ತದಲ್ಲಿರುವ ಬಸ್ ನಿಲ್ದಾಣಗಳು ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿ ಹೋಗಿವೆ.
ಓಫಾರಂ-ಹೊಸಕೋಟೆ ರಸ್ತೆಯಲ್ಲಿರುವ ಬಸ್ ನಿಲ್ದಾಣವಂತೂ ಸಂಪೂರ್ಣವಾಗಿ ಮುರಿದು ಹೋಗಿದೆ. ಒಂದು ವರ್ಷದಿಂದ ಅದೇ ಸ್ಥಿತಿಯಲ್ಲಿಯೇ ಇದೆ. ಈ ನಿಲ್ದಾಣವನ್ನು ತೆರವುಗೊಳಿಸುವುದಾಗಲಿ, ದುರಸ್ತಿ ಮಾಡುವ ಕಾರ್ಯ ನಡೆದಿಲ್ಲ. ಅದರ ಪಕ್ಕದಲ್ಲಿಯೇ ನಿರ್ಮಾಣಗೊಂಡಿರುವ ಇನ್ನೊಂದು ಬಸ್ ನಿಲ್ದಾಣದ ಸ್ಥಿತಿ ದಯನೀಯವಾಗಿದೆ.
ಓಫಾರಂ ವೃತ್ತದಲ್ಲಿ ವೈಟ್ಫೀಲ್ಡ್-ಸರ್ಜಾಪುರ ಮುಖ್ಯ ರಸ್ತೆಯ ನಡುವೆ ಇರುವ ಬಸ್ ನಿಲ್ದಾಣವೂ ಮುರಿದು ಹೋಗಿದೆ. ನಿಲ್ದಾಣದಲ್ಲಿನ ವಿದ್ಯುತ್ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಹೀಗಾಗಿ ಪ್ರಯಾಣಿಕರು ಸಂಜೆಯಾಗುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ನಿಂತುಕೊಳ್ಳಲು ಭಯಪಡುತ್ತಾರೆ. ಈ ಪ್ರದೇಶದಲ್ಲಿ ಸರಗಳ್ಳರ ಹಾವಳಿಯೂ ಹೆಚ್ಚಾಗಿದೆ.