ವಿಜಾಪುರ: ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಪೂರ್ವಭಾಗದ 42 ಗ್ರಾಮಗಳನ್ನು ಮೈಸಾಳ ಆರನೇ ಹಂತದ ಏತ ನೀರಾವರಿ ಯೋಜನೆಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಈ ಗ್ರಾಮಗಳವರು ‘ಗಡಿನಾಡ ಕನ್ನಡಿಗರ ಸ್ವಾಭಿಮಾನಿ ಶೇತ್ಕರಿ ಸಂಘಟನೆ’ ನೇತೃತ್ವದಲ್ಲಿ ಗುರುವಾರ ಜತ್ತನಲ್ಲಿ ಪ್ರತಿಭಟಿಸಿ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿದರು.
ಸಂಖ, ಉಮದಿ, ತಿಕ್ಕುಂಡಿ, ಗುಡ್ಡಾಪುರ, ಬಬಲಾದಿ, ಹೊಸಪೇಟೆ, ಬಡಚಿ, ಅಂಕಲಗಿ, ಉಟಗಿ ಮತ್ತಿತರ ಗ್ರಾಮಗಳಿಂದ ಬಂದಿದ್ದ ರೈತರು ಹಾಗೂ ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಸಂಸ್ಥಾಪಕ, ಕೊಲ್ಹಾಪೂರ ಸಂಸದ ರಾಜು ಶೆಟ್ಟಿ, ಶೇತ್ಕರಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸದಾ ಭಾವು ಖೋತ ಮಾತನಾಡಿ, ‘ಕರ್ನಾಟಕ ಸರ್ಕಾರ ರೈತರಿಗೆ ಸಾಕಷ್ಟು ಅನುಕೂಲತೆ ಕಲ್ಪಿಸಿದೆ. ಈ ಭಾಗದ ಕನ್ನಡಿಗರು ತಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎನ್ನುತ್ತಿದ್ದಾರೆ. ಗಡಿ ಭಾಗದ ರೈತರಿಗೆ ಅನ್ಯಾಯವಾಗುತ್ತಿದ್ದು, ಬೇಡಿಕೆ ಈಡೇರಿಸದಿದ್ದರೆ ಮಹಾರಾಷ್ಟ್ರ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದರು.
‘ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಸೋನಿಯಾ ಗಾಂಧಿ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಗಡಿ ವಿವಾದ ಬಗೆಹರಿಸಬೇಕು’ ಎಂದು ಖೋತ ಆಗ್ರಹಿಸಿದರು.
ನಾಲ್ಕು ದಿನ ಉಪವಾಸ ಸತ್ಯಾಗ್ರಹ ನಡೆಸಿ, ಈಗ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರೂ ಸಂಸದರು, ಶಾಸಕರು ಸೌಜನ್ಯಕ್ಕೂ ತಮ್ಮನ್ನು ಭೇಟಿಯಾಗಿಲ್ಲ, ಮಹಾಜನ್ ವರದಿ ಜಾರಿಯಾದರೆ ಈ ಭಾಗದ 42 ಹಳ್ಳಿಗಳು ಕರ್ನಾಟಕಕ್ಕೆ ಸೇರುತ್ತವೆ ಎಂಬ ಕಾರಣಕ್ಕೆ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಬಿಸಿ ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಮೈಸಾಳ ಆರನೇ ಹಂತದ ಏತ ನೀರಾವರಿ ಯೋಜನೆಯನ್ನು ಈ ಪ್ರದೇಶಕ್ಕೂ ವಿಸ್ತರಿಸುವ ಕುರಿತು ಶೀಘ್ರ ಸಮೀಕ್ಷೆ ಆರಂಭಿಸುವುದಾಗಿ ಲಿಖಿತ ಭರವಸೆ ನೀಡಿದರು.