ಧಾರವಾಡ: ತಾಲ್ಲೂಕಿನ ಹೊನ್ನಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅದನ್ನು ಶೀಘ್ರವೇ ಪರಿಹರಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ಧಾರವಾಡ-ಗೋವಾ ರಸ್ತೆಯನ್ನು ಕೆಲ ಕಾಲ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಓಣಿಯಲ್ಲಿರುವ ಕೊಳವೆಬಾವಿಯನ್ನು ಪುನಶ್ಚೇತನಗೊಳಿಸಿಲ್ಲ. ಹೀಗಾಗಿ ನೀರು ತರಲು ದೂರ ಅಲೆಯಬೇಕಾಗಿದೆ. ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಬೆಳಿಗ್ಗೆ ಖಾಲಿ ಕೊಡಗಳೊಂದಿಗೆ ಮಹಿಳೆಯರು ರಸ್ತೆಗಿಳಿದು ಬಂದ್ ಮಾಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ವೃತ್ತದ ಸಿಪಿಐ ರಾಮನಗೌಡ ಹಟ್ಟಿ ರಸ್ತೆ ತಡೆಯನ್ನು ವಾಪಸ್ ಪಡೆಯುವಂತೆ ಮನವೊಲಿಸಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಬಂಡಿ ಅವರು ಸ್ಥಳಕ್ಕೆ ಆಗಮಿಸಿ, ಮುಂದಿನ 48 ಗಂಟೆಗಳಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆ ನೀಡಿ ಕಾರ್ಯಪ್ರವೃತ್ತರಾದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಜಿಲ್ಲಾ ಖಜಾಂಚಿ ಬಿ.ಐ.ದೊಡಮನಿ, `ಕುಡಿಯುವ ನೀರಿನ ಸಮಸ್ಯೆ ಅಲ್ಲದೇ, ವಿವಿಧ ಯೋಜನೆಗಳಡಿ ನಿರ್ಮಿಸುತ್ತಿರುವ ಮನೆಗಳಿಗೆ ಹೆಂಚು ಹಾಕುವುದು ಬಾಕಿ ಇದೆ. ಈಗ ಮಳೆ ಬಂದು ಮನೆಗಳು ನೆಲಸಮವಾಗುವ ಆತಂಕವಿದೆ. ಆದಷ್ಟು ಬೇಗ ಮನೆಗಳನ್ನು ಪೂರ್ಣಗೊಳಿಸಬೇಕು' ಎಂದು ಒತ್ತಾಯಿಸಿದರು.
ಪ್ರಕಾಶ ಕಲಾಜ, ಪಿ.ಎಂ.ನದಾಫ್, ಪ್ರಭಾವತಿ, ಲಕ್ಷ್ಮಿ ನಾಯಕ, ನೀಲಾ ಜಿಂಗ್ರಾಳೆ, ಮಲ್ಲಮ್ಮ ಲಮಾಣಿ, ಅನುಸೂಯಾ ಕಲಾಜ ಭಾಗವಹಿಸಿದ್ದರು. ನಂತರ ನಿಯೋಗವೊಂದು ಧಾರವಾಡಕ್ಕೆ ಬಂದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.ಸಿ. ಕಚೇರಿಗೆ ಮನವಿ ಸಲ್ಲಿಸಿತು.