ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರು ಸಂಘಟಿತರಾಗಲು ಸಲಹೆ

Last Updated 4 ಮೇ 2012, 9:50 IST
ಅಕ್ಷರ ಗಾತ್ರ

ಗಜೇಂದ್ರಗಡ: ರಾಜ್ಯದ ಎಲ್ಲ ಅಸಂಘಟಿತ ಕೈಮಗ್ಗ ನೇಕಾರರು ಸಂಘಟಿತರಾಗುವ ಮೂಲಕ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕು ಎಂದು ಗದಗ ಜಿಲ್ಲಾ ಸಮಗ್ರ ಕೈಮಗ್ಗ ಸಮೂಹ ಅಭಿವೃದ್ಧಿ ಅಧಿಕಾರಿ ರಾಮಚಂದ್ರಪ್ಪ ತಡಕನಹಳ್ಳಿ ಹೇಳಿದರು.

ಗಜೇಂದ್ರಗಡ ನೇಕಾರರ ಹಿತರಕ್ಷಣಾ ವೇದಿಕೆ ವತಿಯಿಂದ `ಕಾರ್ಮಿಕ ದಿನಾಚರಣೆ~  ಪ್ರಯುಕ್ತ ಇಲ್ಲಿನ ಗಂಜಿಪೇಟೆಯ ಕೊಳಿಯವರ ಕತ್ರಿಯಲ್ಲಿ  ಆಯೋಜಿಸಲಾಗಿದ್ದ ~ನೇಕಾರ ಕಾರ್ಮಿಕ ದಿನಾಚರಣೆ~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಕೈಮಗ್ಗ ನೇಕಾರರ ನಿರಂತರ ಪರಿಶ್ರಮದಿಂದಾಗಿ ರಾಜ್ಯದ ಕೀರ್ತಿ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುವಂತಾಯಿತು ಎಂದರು.

 ಪ್ರಸ್ತುತ ದಿನಗಳಲ್ಲಿ ಅಸಂಘಟಿತ ಕೈಮಗ್ಗ ನೇಕಾರರ ಬದುಕು ಅತಂತ್ರ ಸ್ಥಿತಿಯಲ್ಲಿರುವುದು ಶೋಚನಿಯ. ನೇಕಾರಿಕೆಯನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊ ಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಅನುಷ್ಠಾನಕ್ಕೆ ನೇಕಾರರೆಲ್ಲರು ಶ್ರಮಿಸಬೇಕು ಎಂದರು.

ಹತ್ತಾರು ದಶಕಗಳಿಂದಲ್ಲೂ ಕೈಮಗ್ಗ ನೇಕಾರಿಕೆಯನ್ನೇ ಆಶ್ರಯಿಸಿಕೊಂಡು ಬದುಕುತ್ತಿರುವ ಲಕ್ಷಾಂತರ ಅಸಂಘಟಿತ ನೇಕಾರರು ತಯಾರಿಸುವ ಉಡುಪುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಪರಿಣಾಮ  ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಗ್ಗದ ಬೆಲೆಗಳಿಗೆ ನೇಕಾರರು ಸಿದ್ದ ಪಡಿಸಿದ ಬಟ್ಟೆಗಳನ್ನು ಖರೀದಿಸುವುದರಿಂದ ನೇಕಾರರ ಶ್ರಮಕ್ಕೆ ತಕ್ಕ ಫಲ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಲೆಮಾರುಗಳ ಹಿರಿತನದ ಕೈಮಗ್ಗ ನೇಕಾರಿಕೆಗೆ ಭಾರಿ ಹಿನ್ನೆಡೆ ಉಂಟಾಗಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಭದ್ರತೆ ಇಲ್ಲ: ಅಸಂಘಟಿತ ನೇಕಾರರಿಗೆ ಭದ್ರತೆ ಇಲ್ಲ. ಅಸಂಘಟಿತ ನೇಕಾರರೆಲ್ಲರೂ ಅನಕ್ಷರಸ್ಥರಾಗಿದ್ದು, ಸರ್ಕಾರ ನೇಕಾರಿಕೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಾರಿಗೊಳಿಸಿದ ಯೋಜನೆಗಳ ಕುರಿತಾದ ಸೂಕ್ತ ಮಾಹಿತಿಯೂ ಕೂಡ ಇವರುಗಳಿಗೆ ಲಭ್ಯವಾಗುತ್ತಿಲ್ಲ.

ಈ ಎಲ್ಲ ಕಾರಣಗಳಿಂದಾಗಿ ಬಹುತೇಕ ನೇಕಾರರಿಗೆ ಸರ್ಕಾರದ ಯೋಜನೆಗಳು ಮರೀಚಿಕೆಯಾಗಿದೆ.  ಇವೆಲ್ಲವುಗಳಿಂದ ಹೊರ ಬಂದು ಕೈಮಗ್ಗ ನೇಕಾರಿಕೆಯನ್ನು ಅಭಿವೃದ್ಧಿ ಪಡಿಸಬೇಕಾದರೆ ನೇಕಾರರು ಸರ್ಕಾರಿ ಯೋಜನೆಗಳ ಮಹತ್ವ ಅರಿಯುವಂತಾಗಬೇಕು. ಈ ಹಿನ್ನೆಲೆಯಲ್ಲಿ ಸುಶಿಕ್ಷಿತರಾಗಲು ಕರೆ ನೀಡಿದರು.

ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಸಿದ್ದನಕೊಳ್ಳದ ಡಾ.ಶಿವಕುಮಾರ ಸ್ವಾಮೀಜಿ ಮಾತನಾಡಿ, ಸರ್ಕಾರಿ ಯೋಜನೆಗಳು ನೇಕಾರರಿಗೆ ದೊರಕದಿರುವುದರಿಂದಾಗಿಯೇ ರಾಜ್ಯ ನೇಕಾರರು ಅಭಿವೃದ್ಧಿ ಯಿಂದ ದೂರ ಉಳಿಯುವಂತಾಗಿದೆ.

ಹೆಚ್ಚಿನ ಅನುಕೂಲ ಕಲ್ಪಿಸಿಕೊಡುವಂತೆ ಸರ್ಕಾರಗಳ ಮೇಲೆ ಒತ್ತಡ ಹೆರಲು ಹೋರಾಡುವ ಶಕ್ತಿ ನೇಕಾರರಲ್ಲಿ ಇಲ್ಲ. ಹೀಗಾಗಿ ನೇಕಾರರೆಲ್ಲರೂ ಪರ್ಯಾಯ ವೃತ್ತಿಗಳತ್ತ ಮುಖ ಮಾಡುತ್ತಿದ್ದು, ರಾಜ್ಯ ನೇಕಾರಿಕೆಗೆ ದೊಡ್ಡ ಗಾತ್ರದ ಹಿನ್ನೆಡೆ ಉಂಟಾಗಿದೆ ಎಂದರು.

ನೇಕಾರರ ಅಭಿವೃದ್ಧಿಗೆ ಕೇವಲ ಸರ್ಕಾರದ ಯೋಜನೆಗಳನ್ನು ನಂಬಿಕೊಂಡು ಕುಳಿತರೆ ಸಾಲದು. ಬದಲಾಗಿ ಮಗ್ಗಗಳನ್ನು ಹೊಂದಿರುವ ಮಾಲೀಕರುಗಳು ನೇಕಾರರ ಏಳಿಗೆಯನ್ನು ಗಮನದಲ್ಲಿಟ್ಟು ಕೊಂಡು ಶ್ರಮಿಸಬೇಕು. ಅಂದಾಗ ಮಾತ್ರ ನೇಕಾರರು ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ ಎಂದರು.    

ಗಜೇಂದ್ರಗಡ ನೇಕಾರರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕೊಟ್ರೇಶ ಚಿಲಕಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಇದೇ ಸಂದರ್ಭದಲ್ಲಿ ಕೈಮಗ್ಗ, ವಿದ್ಯುತ್ ಮಗ್ಗ ಹಾಗೂ ಅಟೋಮಿಟಿಕ್ ಮಗ್ಗದ ಹದಿನೈದು ಜನ ಹಿರಿಯ ನೇಕಾರರನ್ನು ಸನ್ಮಾನಿಸಲಾಯಿತು.ಟಿ.ವಿ ರಾಯಬಾಗಿ, ಹೊನ್ನುಸಾ ದಾನಿ, ಮೋಹನಸಾ ರಾಯಬಾಗಿ, ಸಿದ್ದುಸಾ ರಾಯಬಾಗಿ, ಗಣಪತಸಾ ಪವಾರ, ಉಪಸ್ಥಿರಿದ್ದರು.

ಅನ್ನದಾನೀಶ್ವರ ಸ್ವಾಮೀಜಿ ಶತಮಾನೋತ್ಸವ

ಮುಂಡರಗಿ: ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಬಸವ ಜಯಂತಿಯ ಶತಮಾನೋತ್ಸವದ ಅಂಗವಾಗಿ ಇದೇ 4ರಂದು ಡಾ.ಅನ್ನ ದಾನೀಶ್ವರ ಸ್ವಾಮೀಜಿ ಅವರ 69ನೇ ಜನ್ಮ ದಿನೋತ್ಸವ ಹಾಗೂ ಬಸವಣ್ಣ ಅವರ 917ನೇ ಜಯಂತೋತ್ಸವ ಸಮಾರಂಭ ಏರ್ಪಡಿಸಲಾಗಿದೆ.

ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರ ಹುಟ್ಟುಹಬ್ಬದ ನಿಮಿತ್ತ ಬೆಳಿಗ್ಗೆ 10ಗಂಟೆಗೆ ಐಎಂಐ ಗದಗ ಹಾಗೂ ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮತ್ತು ಉಚಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

 ಸಂಜೆ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಉಪನ್ಯಾಸ ಸಮಾರಂಭ ಹಮ್ಮಿ ಕೊಳ್ಳ ಲಾಗಿದೆ. ಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ದೇವರು ಬಸವಣ್ಣ ಅವರ ಸಾಮಾಜಿಕ ಮೌಲ್ಯಗಳ ಕುರಿತು, ಉಪನ್ಯಾಸಕ ಆರ್.ಎಲ್ ಪೋಲೀಸ್ ಪಾಟೀಲ ಚನ್ನಬಸವಣ್ಣ ಅವರ ಜೀವನ ಸಾಧನೆ ಹಾಗೂ ಕವಿವಿಯ ಡಾ.ಆರ್.ಎಂ ಷಡಕ್ಷರಯ್ಯ ಅವರು ಧರ್ಮ ಸಾಹಿತ್ಯದ ಸಂಗಮ ಶ್ರಿಸನ್ನಿಧಿ ಅವರ ಕುರಿತು ಉಪನ್ಯಾಸ ನೀಡಲಿದ್ದಾರೆ. 

ಘೋಡಗೇರಿಯ ಶಿವಾನಂದ ದೇವರು, ಮುಗಳಿಯ ಕುಮಾರ ದೇವರು, ಚಟ್ನಳ್ಳಿಯ ಮೃತ್ಯುಂಜಯ ದೇವರು, ಬೀಳಗಿಯ ವೀರಭದ್ರ ದೇವರು ಹಾಗೂ ಭಕ್ತಿ ಸೇವೆಯನ್ನು ವಹಿಸಿಕೊಂಡಿರುವ ಗಣೇಶಪ್ಪ ಶೇಡದ ಮತ್ತಿತರರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT