ತುಮಕೂರು: ನೀರಾವರಿ ತಜ್ಞ ಪರಮಶಿವಯ್ಯ ಸಿದ್ಧಪಡಿಸಿರುವ ನೇತ್ರಾವತಿ ನದಿ ತಿರುವು ಹಾಗೂ ಎತ್ತಿನಹೊಳೆ ಯೋಜನೆ ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದರು.
ತಿಪಟೂರಿನ ಕೆರೆಕೋಡಿ ರಂಗಾಪುರ ಕ್ಷೇತ್ರದಲ್ಲಿ ಭಾನುವಾರ ಗುರು ಸಿದ್ದರಾಮೇಶ್ವರರ 839ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭಲ್ಲಿ ಭಾಗವಹಿಸಿದ್ದ ಅವರು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಇದಕ್ಕೂ ಮುನ್ನ ಸಮಾರಂಭದಲ್ಲಿ ಮಾತನಾಡಿದ ಅವರು, ಬಯಲುಸೀಮೆ ಮತ್ತು ಮಧ್ಯ ಕರ್ನಾಟಕ ಜನರ ನೀರಿನ ದಾಹ ತೀರಿಸಲು ಸರ್ಕಾರ ಬದ್ಧವಾಗಿದೆ. ಹಂತ-ಹಂತವಾಗಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು.
ಈ ಎರಡು ಯೋಜನೆ ಜಾರಿಯನ್ನು ತೀವ್ರಗೊಳಿಸಲು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯನ್ನು ಇನ್ನು ಹತ್ತು ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆಸಲಾಗುವುದು. ಯೋಜನೆ ಚುರುಕುಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮ ಕುರಿತು ಚರ್ಚಿಸಲಾಗುವುದು ಎಂದರು.
ನೇತ್ರಾವತಿ ನದಿ ತಿರುವು ಯೋಜನೆ ಜಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಹಾಗೂ ಪರಿಸರವಾದಿಗಳಿಂದ ವಿರೋಧದ ಪ್ರಶ್ನೆಗೆ ಉತ್ತರಿಸಿ, ಈ ಯೋಜನೆ ಜಾರಿ ಸಂಬಂಧ ಇರುವ ದ್ವಂದ್ವ ಗಮನಿಸಿದ್ದೇನೆ. ನೇತ್ರಾವತಿ ನದಿ ತಿರುವು ಯೋಜನೆ ಜಾರಿಯಲ್ಲಿ ಪರಿಸರ ಸಂಬಂಧ ದ್ವಂದ್ವಗಳಿವೆ. ಎತ್ತಿನಹೊಳೆ ಜಾರಿ ಬೇಡ ಎಂದು ಕೋಲಾರದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಈ ಎರಡು ಜಿಲ್ಲೆಗಳ ಜನರೊಂದಿಗೆ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಂಡೇ ಯೋಜನೆ ಜಾರಿ ಮಾಡಲಾಗುವುದು. ಎತ್ತಿನಹೊಳೆ ಯೋಜನೆಗಾಗಿ ಸರ್ಕಾರ ಬಜೆಟ್ನಲ್ಲಿ ರೂ. 200 ಕೋಟಿ ಬಿಡುಗಡೆ ಮಾಡಿತ್ತು. ಆದರೆ ಆ ಹಣವನ್ನು ಈವರೆಗೂ ಬಳಸಿಕೊಳ್ಳದೇ ಇರುವುದು ದುರಾದೃಷ್ಟಕರ ಎಂದರು.