ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಬೆಳೆಯಲಾಗಿರುವ ಜಂಬು ನೇರಳೆ ಮರಗಳಿಗೆ ತೊಗಟೆ ಕೊರಕ ಹುಳುವಿನ ಬಾಧೆ ಉಂಟಾಗಿದೆ. ಕೆಲವು ಕಡೆ ಗುಂಪು ಗುಂಪಾಗಿ ಕೊಂಬೆಗಳನ್ನು ಮುತ್ತಿರುವ ಭಯಂಕರ ಹುಳುಗಳು ತೊಗಟೆಯನ್ನು ತಿಂದು ಮರಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿವೆ.
ಮೈಮೇಲೆ ಚುಕ್ಕೆ ಹಾಗೂ ಕೂದಲನ್ನು ಹೊಂದಿರುವ ಹೆಬ್ಬೆರಳು ಗಾತ್ರದ ಹುಳುಗಳು, ಜಂಬು ನೇರಳೆ ಮರಗಳ ಕಾಂಡ ಹಾಗೂ ಕೊಂಬೆಗಳಲ್ಲಿ ಜಮಾಯಿಸಿ ತೊಗಟೆಗೆ ಹಾನಿ ಉಂಟುಮಾಡುತ್ತಿವೆ. ರಾತ್ರಿ ಹೊತ್ತಿನಲ್ಲಿ ಸೊಪ್ಪನ್ನೂ ತಿಂದು ತೇಗುತ್ತಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಭದ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಜಂಬು ನೇರಳೆ ಹಣ್ಣಿಗೆ ಬೇಡಿಕೆ ಮತ್ತು ಬೆಲೆ ಇರುವುದರಿಂದ ತಾಲ್ಲೂಕಿನ ಕೆಲವು ರೈತರು ತಮ್ಮ ಜಮೀನಲ್ಲಿ ಜಂಬು ನೇರಳೆ ಮರಗಳನ್ನು ಬೆಳೆಸಿದ್ದಾರೆ. ಸಾಮಾಜಿಕ ಅರಣ್ಯ ಇಲಾಖೆ ರಸ್ತೆ ಬದಿಗಳಲ್ಲಿ ಜಂಬು ನೇರಳೆ ಹಾಗೂ ನಾಯಿ ನೇರಳೆ ಮರಗಳನ್ನು ಬೆಳೆಸಿದೆ. ತೊಗಟೆ ಕೊರಕ ಹುಳುಗಳ ಉಪಟಳ ಹೆಚ್ಚಿದಲ್ಲಿ ಅವು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಹುಳುವಿನ ಸಮಸ್ಯೆ ನಿವಾರಣೆಗೆ ಅಗತ್ಯ ಸಲಹೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ವಿಎಸ್ಎಸ್ಎನ್ಗೆ ಆಯ್ಕೆ
ಮುಳಬಾಗಲು: ತಾಲ್ಲೂಕಿನ ಮೋತಕಪಲ್ಲಿ ವ್ಯವಸಾಯ ಸೇವಾಸಹಕಾರ ಸಂಘದ ಅಧ್ಯಕ್ಷರಾಗಿ ಸಿಪಿಎಂ ಬೆಂಬಲಿಗ ಮಡಿವಾಳ ಪಾಪಣ್ಣ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿಗ ನಾಗರಹಳ್ಳಿ ಜೆ.ಕೃಷ್ಣರೆಡ್ಡಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಾಗಿ ಜೆಡಿಎಸ್ನ ಎಂ.ಸಿ. ರಘುನಾಥ್, ಚಿಕ್ಕಚನ್ನಪ್ಪ, ಶಿವಣ್ಣ, ವೆಂಕಟೇಶಪ್ಪ, ರಾಮಕ್ಕ, ಆಚಂಪಲ್ಲಿ ಆಮರಪ್ಪ, ಎಂ.ಎನ್. ಬಾಬು, ಎಂ.ಎನ್.ಶಾರದಾ ಆಯ್ಕೆಯಾಗಿದ್ದಾರೆ. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆಲಂಗೂರು ಶಿವಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ತಾಯಲೂರು ರಮೇಶ್, ಕೃಷ್ಣಮೂರ್ತಿ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.