ದಾವಣಗೆರೆ: ನೊಣಗಳ ಕಾಟದಿಂದ ರೋಸಿ ಹೋಗಿದ್ದ ಹೊಸ ಬೆಳವನೂರು ಗ್ರಾಮಸ್ಥರು ಇನ್ನು ಆತಂಕಪಡಬೇಕಿಲ್ಲ. ನಿದ್ರೆ, ಊಟದ ಸಮಯದಲ್ಲಿ ನೊಣಗಳ ಜತೆಗೆ ಸೆಣಸಾಟ ನಡೆಸಬೇಕಿದ್ದ ಅವರು, ಕೆಲವೇ ದಿನಗಳಲ್ಲಿ ಚಿಂತೆಯಿಲ್ಲದೆ ಊಟ, ನಿದ್ರೆ ಮಾಡಬಹುದು!
ಜಿಲ್ಲಾಡಳಿತ ಬುಧವಾರದಿಂದ ಗ್ರಾಮದ ನಾಲ್ಕು ಕೋಳಿಫಾರಂಗಳ ತೆರವು ಕಾರ್ಯಾಚರಣೆ ಪ್ರಾರಂಭಿಸಿದೆ. ಗ್ರಾಮದ ಮಧ್ಯಭಾಗದ ಲ್ಲಿದ್ದ ಶ್ರೀಶೈಲ, ಶ್ರೀರಾಮ, ವೆಂಕಟೇಶ್ವರ ಹಾಗೂ ಲಕ್ಷ್ಮೀ ವೆಂಕಟೇಶ್ವರ ಫಾರಂಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಫಾರಂನಲ್ಲಿ ಈಗಿರುವ ಕೋಳಿಗಳು ಮಾರಾಟವಾದ ಕೂಡಲೇ ನಾಲ್ಕೂ ಫಾರಂಗಳು ಬಂದ್ ಆಗಲಿವೆ.
ಕೆಲವು ದಿನಗಳ ಹಿಂದೆ ಜಿಲ್ಲಾಡಳಿತ ಫಾರಂಗಳನ್ನು ಸ್ಥಳಾಂತರ ಮಾಡುವಂತೆ ಅಂತಿಮ ನೋಟಿಸ್ ನೀಡಿತ್ತು. ಅದಕ್ಕೂ ಉತ್ತರಿಸದೇ ಮಾಲೀಕರು ಕೋಳಿ ಸಾಕಣೆ ಮುಂದುವರಿಸಿದ್ದರು. ಬುಧವಾರ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ತೆರವು ಕಾರ್ಯಾಚರಣೆಯ ವ್ಯವಸ್ಥೆ ಮಾಡಿದರು.
ಇಬ್ಬರು ಪಶು ವೈದ್ಯರು, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಒಬ್ಬ ಗ್ರಾಮ ಲೆಕ್ಕಿಗ ಹಾಗೂ ಪೊಲೀಸರನ್ನು ಉಸ್ತುವಾರಿಗೆ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.