ಬೆಂಗಳೂರು: `ನ್ಯಾಯಾಂಗ ಹಾಗೂ ವಕೀಲರಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಗೆ ತ್ವರಿತವಾಗಿ ಅನುಮೋದನೆ ನೀಡಲಾಗುತ್ತದೆ. ಹೈಕೋರ್ಟ್ ಆವರಣದಲ್ಲಿ ವಕೀಲರಿಗೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸುವ ಪ್ರಸ್ತಾವನೆಗೆ ಸರ್ಕಾರದ ಕಡೆಯಿಂದ ಯಾವುದೇ ಅಡಚಣೆ ಇಲ್ಲ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಬೆಂಗಳೂರು ವಕೀಲರ ಸಂಘ ಹೈಕೋರ್ಟ್ನಲ್ಲಿ ಮಂಗಳವಾರ ಆಯೋಜಿಸಿದ್ದ `ವಕೀಲರ ದಿನಾಚರಣೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ವಕೀಲರ ಸಂಘಕ್ಕೆ ಅನುದಾನ ನೀಡಲು ಸರ್ಕಾರ ಬದ್ಧ. ಕಿರಿಯ ವಕೀಲರಿಗೆ ಬಾಕಿ ಇರುವ ಮಾಸಿಕ ಸ್ಟೈಫಂಡ್ ಮೊತ್ತವನ್ನು ಶೀಘ್ರದಲ್ಲೇ ನೀಡಲಾಗುವುದು. ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಿಸಲು ಅಗತ್ಯವಿರುವ 10 ಕೋಟಿ ರೂಪಾಯಿಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದರು.
`ನ್ಯಾಯಾಂಗ ಕ್ರಿಯಾಶೀಲ ಆಗಿದ್ದಾಗ, ಕಾರ್ಯಾಂಗವೂ ಚುರುಕಾಗಿ ಕೆಲಸ ಮಾಡುತ್ತದೆ. ರಾಜಕೀಯ ಒತ್ತಡಗಳ ಕಾರಣ ನಮಗೆ ಕೆಲವು ವಿಷಯಗಳ ಕುರಿತು ಸೂಕ್ತ ನಿರ್ಧಾರವನ್ನು ತಕ್ಷಣದಲ್ಲಿ ತೆಗೆದುಕೊಳ್ಳಲು ಆಗುವುದಿಲ್ಲ. ಆದರೆ, ಅದೇ ವಿಷಯಗಳ ಬಗ್ಗೆ ನ್ಯಾಯಾಲಯಗಳು ಆದೇಶ ನೀಡಿದಾಗ, ನಾವು ಅದನ್ನು ಪಾಲಿಸಲೇ ಬೇಕಾಗುತ್ತದೆ' ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು, `ವಕೀಲರಿಗೆ ಕೊಠಡಿಗಳನ್ನು ನಿರ್ಮಿಸಬೇಕು ಎಂಬ ಬೇಡಿಕೆ, ನ್ಯಾಯಾಂಗ ಕಾರ್ಯಕ್ಷಮತೆಗೆ ಪೂರಕವಾಗಿದೆ' ಎಂದು ಹೇಳಿದರು.
ಮಾರ್ಚ್ ತಿಂಗಳಿನಲ್ಲಿ ನಗರ ಸಿವಿಲ್ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕೆಲವು ವಕೀಲರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸರ ನಡುವೆ ಸಂಭವಿಸಿದ ಅಹಿತಕರ ಘಟನೆಗಳ ಕುರಿತು ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ಅವರು, `ಅಲ್ಲಿ ಸೂಕ್ತ ಮೂಲಸೌಕರ್ಯ ವ್ಯವಸ್ಥೆ ಇದ್ದಿದ್ದರೆ ಅಂಥ ಘಟನೆ ಸಂಭವಿಸುತ್ತಿರಲಿಲ್ಲ' ಎಂದರು.