ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಾಧಿಕಾರಿಗಳಿಗೆ ತರಬೇತಿ, ಮತದಾರರ ಮುಖಾಮುಖಿ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷದ ಬೂತ್ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಪದಾಧಿಕಾರಿಗಳಿಗೆ ಇದೇ 15ರ ನಂತರ ತರಬೇತಿ ಶಿಬಿರ ಆಯೋಜಿಸಲು ಕೆಪಿಸಿಸಿ ನಿರ್ಧರಿಸಿದೆ. ಅಲ್ಲದೆ, ಅಕ್ಟೋಬರ್ 2ರ ನಂತರ ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ `ಮತದಾರರೊಂದಿಗೆ ಮುಖಾಮುಖಿ~ ಕಾರ್ಯಕ್ರಮ ಆರಂಭಿಸಲೂ ಪಕ್ಷ ನಿರ್ಧರಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ಬಿ.ಎಲ್. ಶಂಕರ್, `ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮದ ಸಂಚಾಲಕ ಕಾಗೋಡು ತಿಮ್ಮಪ್ಪ ಮತ್ತು ಮಾಜಿ ಶಾಸಕ ಎನ್.ಎಸ್. ಬೋಸರಾಜು ಈ ವಿಷಯ ತಿಳಿಸಿದರು.

`ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜನರಿಗೆ ಕಾಂಗ್ರೆಸ್ ಪಕ್ಷ ಏಕೆ ಅಗತ್ಯ ಎಂಬ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ತರಬೇತಿ ಶಿಬಿರ ನಡೆಯಲಿದೆ. ಮಾಜಿ ಶಾಸಕ ಮಹಿಮಾ ಪಟೇಲ್ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರಾದ ವಿ.ಆರ್. ಸುದರ್ಶನ್, ಡಾ. ಕೃಪಾ ಆಳ್ವ ಮತ್ತಿತರರು ಈ ಶಿಬಿರದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆ~ ಎಂದು ಶಂಕರ್ ತಿಳಿಸಿದರು.

ಮತದಾರರೊಂದಿಗೆ ಮುಖಾಮುಖಿ: ಅಕ್ಟೋಬರ್ 2ರಿಂದ ಪಕ್ಷದ ಮುಖಂಡರು ರಾಜ್ಯದ ಎಲ್ಲ ಮತಗಟ್ಟೆಗಳಿಗೆ ತೆರಳಿ ಅಲ್ಲಿನ ಮತದಾರರನ್ನು ಭೇಟಿಮಾಡಿ, ಪಂಚಾಯಿತಿ ಮತ್ತು ವಾರ್ಡ್ ಮಟ್ಟದ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಇದು ಮೂರು ತಿಂಗಳ ಕಾರ್ಯಕ್ರಮ. ಕಾರ್ಯಕರ್ತರನ್ನು ಆಧರಿಸಿದ ಪಕ್ಷವನ್ನಾಗಿ ಬೆಳೆಸುವ ಉದ್ದೇಶ ಈ ಕಾರ್ಯಕ್ರಮಕ್ಕಿದೆ ಎಂದು ತಿಳಿಸಿದರು.

ಇನ್ನು ಮುಂದೆ ಪಕ್ಷ ದೊಡ್ಡ ಪ್ರಮಾಣದ ಸಭೆ, ಸಮಾರಂಭಗಳನ್ನು ಆಯೋಜಿಸುವುದಕ್ಕಿಂತ ಜನಸಾಮಾನ್ಯರನ್ನು ನೇರವಾಗಿ ಭೇಟಿಮಾಡಲು ಹೆಚ್ಚಿನ ಆದ್ಯತೆ ನೀಡಲಿದೆ ಎಂದರು.

ಸಮಾರೋಪ:
`ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮದ ಸಮಾರೋಪ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಇದೇ 12ರಂದು ನಡೆಯಲಿದೆ. ಅದೇ ದಿನ ಸಂಜೆ ಕೊಪ್ಪಳದಲ್ಲಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯ ಚಾಲನೆ ಪಡೆಯಲಿದೆ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT