ಚಿತ್ರದುರ್ಗ: ಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಜಿಲ್ಲಾ ಯಾದವ (ಗೊಲ್ಲ)ರ ಸಂಘ ಒತ್ತಾಯಿಸಿದೆ.
ಜಿಲ್ಲಾ ಯಾದವ (ಗೊಲ್ಲ)ರ ಸಂಘ ಹಾಗೂ ಅಲೆಮಾರಿ ಮತ್ತು ಅರೆ ಅಲೆಮಾರಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಸೋಮವಾರ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಘದ ಮುಖಂಡರು ಈ ಬೇಡಿಕೆ ಸಲ್ಲಿಸಿದರು.
ಮಾಜಿ ಶಾಸಕ ಎ.ವಿ. ಉಮಾಪತಿ ಮಾತನಾಡಿ, ಗೊಲ್ಲ ಜನಾಂಗದ ಕುಲಶಾಸ್ತ್ರೀಯ ಅಧ್ಯಯನ ವರದಿ ಪಡೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಗೊಲ್ಲರ ಉಪ ಕಸುಬು ಕುರಿ ಸಾಕಾಣಿಕೆ. ಆದರೆ, ಕುರಿ ಕಾಯುವವರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಉಪಟಳ ಹೆಚ್ಚಾಗಿರುವುದರಿಂದ ಪಾಸ್ ನೀಡುವ ವ್ಯವಸ್ಥೆಯಾಗಬೇಕು.
ಗೊಲ್ಲರಹಟ್ಟಿಗಳಲ್ಲಿ ಹೆಚ್ಚಿನ ಜನ ಗುಡಿಸಲುಗಳಲ್ಲಿ ವಾಸಿಸುತ್ತಿರುವುದರಿಂದ ಗೊಲ್ಲರಿಗೆ ಮತ್ತು ಜೋಗಿ ಜನಾಂಗಕ್ಕೆ ಪ್ರತ್ಯೇಕವಾಗಿ ಮನೆ ನೀಡುವ ಯೋಜನೆ ರೂಪಿಸಬೇಕು ಎಂದು ಕೋರಿದರು.
ಸಮಾರಂಭ ಉದ್ಘಾಟಿಸಿದ ಮಾಜಿ ಸಂಸದ ಪಿ. ಕೋದಂಡರಾಮಯ್ಯ ಮಾತನಾಡಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮೂರು ಷರತ್ತುಗಳಿವೆ. ನಾಗರಿಕ ಸಮಾಜದಿಂದ ಜನಾಂಗ ದೂರವಿರಬೇಕು. ಆ ಜನಾಂಗಕ್ಕೆ ಅವರದ್ದೇ ಆದ ಭಾಷೆ ಇರಬೇಕು ಮತ್ತು ಅಂತಹ ಜನಾಂಗಕ್ಕೆ ತನ್ನದೇ ಆದ ಕಟ್ಟುಪಾಡುಗಳು, ಸಂಸ್ಕೃತಿ ಹೊಂದಿರಬೇಕು. ಈ ಷರತ್ತುಗಳನ್ನು ಮೊದಲನೆಯದಾಗಿ ಲಂಬಾಣಿ ಜನಾಂಗ ಮತ್ತು ಎರಡನೆಯದಾಗಿ ಗೊಲ್ಲ ಜನಾಂಗ ಪೂರೈಸುತ್ತವೆ. ಆದ್ದರಿಂದ ಸಚಿವರು ಈ ಬೇಡಿಕೆಯನ್ನು ಈಡೇರಿಸಬೇಕು ಎಂದು ಕೋರಿದರು.
ಬಿಸಿಯೂಟ ಮತ್ತು ಬೈಸಿಕಲ್ ವ್ಯವಸ್ಥೆ ಜಾರಿಯಾದ ನಂತರ ಮೆಟ್ರಿಕ್ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೊರತೆ ಇದೆ. ಅವುಗಳನ್ನು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಾಗಿ ಪರಿವರ್ತಿಸಬೇಕು ಎಂದು ಕೋದಂಡರಾಮಯ್ಯ ಮನವಿ ಮಾಡಿದರು.
ಗೊಲ್ಲ ಜನಾಂಗದ ಬೇಡಿಕೆಗಳ ಮನವಿಯನ್ನು ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಸಲ್ಲಿಸಲಾಯಿತು.