ನವದೆಹಲಿ (ಪಿಟಿಐ): ಪರಿಶಿಷ್ಟ ಜಾತಿ, ಪಂಗಡದ (ಎಸ್ಸಿ/ಎಸ್ಟಿ) ನೌಕರರಿಗೆ ಸರ್ಕಾರಿ ಉದ್ಯೋಗದಲ್ಲಿ ಬಡ್ತಿ ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆ ಸೋಮವಾರ ಭಾರೀ ಬಹುಮತದಿಂದ ಅಂಗೀಕರಿಸಿತು.
245 ಸದಸ್ಯ ಬಲದ ಸದನದಲ್ಲಿ 206 ಮಂದಿ ಮಸೂದೆ ಪರ, 10 ಸದಸ್ಯರು ವಿರುದ್ಧವಾಗಿ ಮತ ಹಾಕಿದರು. ಸಂವಿಧಾನ ತಿದ್ದುಪಡಿ ಮಸೂದೆಗೆ 2/3 ಸದಸ್ಯರ ಬೆಂಬಲ ಅಗತ್ಯ.
`ಎಸ್ಸಿ/ಎಸ್ಟಿ' ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿದ್ದ ಸಮಾಜವಾದಿ ಪಕ್ಷದ 9 ಸದಸ್ಯರು ಹಾಗೂ ಪಕ್ಷೇತರ ಸದಸ್ಯ ಅದೀಬ್ ಮಸೂದೆ ವಿರುದ್ಧವಾಗಿ ಮತ ಚಲಾಯಿಸಿದರು. ಈ ಮಸೂದೆಯನ್ನು ಬಲವಾಗಿ ವಿರೋಧಿಸಿದ್ದ ಶಿವಸೇನೆಯ ನಾಲ್ವರು ಸದಸ್ಯರು ಗೈರು ಹಾಜರಾಗಿದ್ದರು.
ಮಾಯಾವತಿ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಎಸ್ಸಿ/ ಎಸ್ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲು ನಿರ್ಧರಿಸಿದ್ದರು. ಇದನ್ನು ಸುಪ್ರೀಂಕೋರ್ಟ್ ವಜಾಮಾಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟ ಸೆಪ್ಟೆಂಬರ್ 5ರಂದು ಎಸ್ಸಿ/ ಎಸ್ಟಿ ನೌಕರರಿಗೆ ಬಡ್ತಿ ಮೀಸಲಾತಿ ನೀಡಲು ತೀರ್ಮಾನಿಸಿ ಮಸೂದೆ ಸಿದ್ಧಪಡಿಸಿತ್ತು.