ಬೆಂಗಳೂರು: ರೌಡಿ ವಿಜಯ್ಕುಮಾರ್ ಅಲಿಯಾಸ್ ಕವಳನನ್ನು ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿಯ ಸಹಚರರನ್ನು ಬಂಧಿಸಿರುವ ಶಿವಾಜಿನಗರ ಪೊಲೀಸರು ರಿವಾಲ್ವರ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.
ನಾಗವಾರ ಮುಖ್ಯರಸ್ತೆಯ ಆನಂದ್ (32) ಮತ್ತು ಬೊಮ್ಮನಹಳ್ಳಿಯ ಮಧು (23) ಬಂಧಿತರು. ರವಿ ಪೂಜಾರಿ ಸಹಚರರಾದ ಆರೋಪಿಗಳು ಶಿವಾಜಿನಗರದಲ್ಲಿ ಶನಿವಾರ ರಾತ್ರಿ ರೌಡಿ ಕವಳನನ್ನು ಕೊಲ್ಲಲು ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ತಿಲಕ್ನಗರ ಠಾಣೆ ವ್ಯಾಪ್ತಿಯ ಶಬನಮ್ ಡೆವಲಪರ್ಸ್ ಕಚೇರಿಯಲ್ಲಿ 2007ರಲ್ಲಿ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ್ನನ್ನು ಈ ಹಿಂದೆಯೇ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಕಾರಣಕ್ಕಾಗಿ ನ್ಯಾಯಾಲಯ ಆತನ ಬಂಧನಕ್ಕೆ ವಾರೆಂಟ್ ಜಾರಿ ಮಾಡಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.