ಭದ್ರಾವತಿ: ಹಳೇನಗರ ಠಾಣೆ ಪಿಎಸ್ಐ ಅಮಾನತಿಗೆ ಒತ್ತಾಯಿಸಿ ವಕೀಲರು ಮಂಗಳವಾರ ಠಾಣೆ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.ಹಿರಿಯ ವಕೀಲರ ಜತೆ ಅನುಚಿತ ವರ್ತನೆ ನಡೆಸಿದ ಪಿಎಸ್ಐ ಸುರೇಶ್ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಕಳೆದೆರಡು ದಿನದಿಂದ ಪ್ರತಿಭಟನೆ ನಡೆಸಿದ ವಕೀಲರು ಮಂಗಳವಾರ ಠಾಣೆ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದ ತೀವ್ರತೆ ಅರಿತ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾವಿನ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಹಾಗೂ ನಾಗರಿಕರ ಮನವಿಯನ್ನು ಸ್ವೀಕರಿಸಿದರು.ಈ ಹಂತದಲ್ಲಿ ಮಾತನಾಡಿದ ಅವರು, ಅಧಿಕಾರಿ ವಿರುದ್ಧ ಇರುವ ಆರೋಪವನ್ನು ಪರಿಶೀಲಿಸಿದ ನಂತರ ಕಾನೂನು ಸಮ್ಮತವಾಗಿ ಕ್ರಮ ತೆಗೆದುಕೊಳ್ಳುವ ಭರವಸೆ ವ್ಯಕ್ತಪಡಿಸಿದರು.
ಸ್ಥಳದಲ್ಲಿ ಹಾಜರಿದ್ದ ನೂರಾರು ನಾಗರಿಕರು ಸಹ ಇದೇ ಸಂದರ್ಭದಲ್ಲಿ ಪಿಎಸ್ಐ ವರ್ತನೆ ಕುರಿತಂತೆ ತಮ್ಮ ಅಹವಾಲು ಹೇಳಿಕೊಂಡರು. ಇದಕ್ಕೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸುವ ಭರವಸೆಯನ್ನು ಅವರು ನೀಡಿದರು.
ಆಕ್ರೋಶ: ಕಳೆದೆರಡು ದಿನದಿಂದ ಪ್ರತಿಭಟನೆ ನಡೆಸಿದ್ದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವ ಕ್ರಮವನ್ನು ಖಂಡಿಸಿ ವಕೀಲರು ಅಲ್ಲಿ ನಡೆದ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಹಂತದಲ್ಲಿ ಕೋಪಗೊಂಡ ಪ್ರತಿಭಟನಾಕಾರರು ಠಾಣೆ ಒಳಗೆ ನುಗ್ಗುವ ಯತ್ನ ಸಹ ನಡೆಸಿದರು. ಈ ಹಂತದಲ್ಲಿ ಹಿರಿಯ ವಕೀಲರು ಹಾಗೂ ಪೊಲೀಸರು ಅವರನ್ನು ತಡೆದು ಪರಿಸ್ಥಿತಿ ತಿಳಿಗೊಳಿಸುವ ಯತ್ನ ನಡೆಸಿದರು.
ಧರಣಿ ಸ್ಥಳಕ್ಕೆ ಶಾಸಕ ಬಿ.ಕೆ. ಸಂಗಮೇಶ್ವರ, ಚಿನ್ನ ಬೆಳ್ಳಿ ವರ್ತಕರ ಸಂಘದ ಪಾವಸ್ಕರ್, ಬಿಜೆಪಿ ಮುಖಂಡರು ಹಾಗೂ ವಿವಿಧ ಸಂಘ- ಸಂಸ್ಥೆಗಳು ಪದಾಧಿಕಾರಿಗಳು ಭೇಟಿ ನೀಡಿದರು.ಸಂಘದ ಅಧ್ಯಕ್ಷ ಎ.ಬಿ. ನಂಜಪ್ಪ, ಕಾರ್ಯದರ್ಶಿ ಎಚ್.ಎಲ್. ವಿಶ್ವನಾಥ್, ವಿ. ವೆಂಕಟೇಶ್ ಸೇರಿದಂತೆ ಹಲವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.