ಚಿಕ್ಕಮಗಳೂರು: `ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ವಿಕಾಸ್ ತಮ್ಮ ಕಚೇರಿ ಕೊಠಡಿಯಲ್ಲೇ ಸೋಮವಾರ ಹಲ್ಲೆ ಮಾಡಿದ್ದಾರೆ~ ಎಂದು ಸಮೀಪದ ಮಲ್ಲಂದೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಆರೋಪಿಸಿದ್ದಾರೆ.
ಅವರ ಬಲಗಣ್ಣಿನ ಹುಬ್ಬಿನ ಮೇಲೆ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮಾಂತರ ವೃತ್ತದ ಇನ್ಸ್ಪೆಕ್ಟರ್ ಪಂಚಾಕ್ಷರಪ್ಪ, ತಮ್ಮ ವಿರುದ್ಧ ಕರ್ತವ್ಯ ಲೋಪದ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಸಂಜೆ ಎಸ್ಪಿ ಅವರ ಕೊಠಡಿಗೆ ಹೋಗಿದ್ದಾಗ ಹಲ್ಲೆ ನಡೆಸಿದರು ಎಂದು ಚಂದ್ರಶೇಖರ್ ಅವರು ಆರೋಪಿಸಿದ್ದಾರೆ.
`ಹಲ್ಲೆ ಮಾಡಿದ್ದೇನೆ ಎಂದು ಹೇಳಿದ್ದು ಯಾರು? ಚಂದ್ರಶೇಖರ್ 5-6 ದಿನಗಳಿಂದ ಗೈರು ಹಾಜರಾಗಿದ್ದಾರೆ. ಗ್ರಾಮಾಂತರ ಇನ್ಸ್ಪೆಕ್ಟರ್ ಈತನ ಅಶಿಸ್ತಿನ ಬಗ್ಗೆ ದೂರು ನೀಡಿದ್ದಾರೆ. ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಿದ್ದೇನೆ. ಅಮಾನತು ಶಿಕ್ಷೆಯಿಂದ ಪಾರಾಗಲು ಹಲ್ಲೆಯ ನಾಟಕ ನಡೆಸುತ್ತಿರಬೇಕು~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಪ್ರತಿಕ್ರಿಯಿಸಿದರು.