ಬೆಂಗಳೂರು: `ದ್ವಿತೀಯ ಪಿಯುಸಿ ಗಣಿತ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಹಲವಾರು ದೋಷಗಳಿವೆ. ಹಾಗಾಗಿ, ಗಣಿತ ಪರೀಕ್ಷೆಯನ್ನು ಪುನಃ ನಡೆಸಬೇಕು' ಎಂದು ಕೋರಿ ಎಚ್.ಎಂ. ಕೌಶಿಕ್ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ, ಸರ್ಕಾರ ಮತ್ತು ಪದವಿಪೂರ್ವ ಶಿಕ್ಷಣ ಮಂಡಳಿಗೆ ನೋಟಿಸ್ ಜಾರಿಗೆ ಗುರುವಾರ ಆದೇಶಿಸಿದ್ದಾರೆ.
`ಮಾರ್ಚ್ 18ರಂದು ನಡೆದ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸರಿಯಾಗಿ ಸಿದ್ಧಪಡಿಸಿಲ್ಲ. ಆರು ಪ್ರಶ್ನೆಗಳು ಸರಿಯಾಗಿ ಮುದ್ರಿತವಾಗಿಲ್ಲ. ಐದು ಪ್ರಶ್ನೆಗಳಿಗೆ ತಲಾ ಎರಡು ಅಂಕ ನೀಡಬೇಕಿತ್ತು, ಆದರೆ ಅವುಗಳಿಗೆ ತಲಾ ಒಂದು ಅಂಕ ನಿಗದಿ ಮಾಡಲಾಗಿದೆ. ಒಂದು ಪ್ರಶ್ನೆಯನ್ನು ತಪ್ಪಾಗಿ ಮುದ್ರಿಸಲಾಗಿದೆ' ಎಂದು ಅರ್ಜಿಯಲ್ಲಿ ದೂರಲಾಗಿದೆ.
ತಪ್ಪಾಗಿ ಪ್ರಕಟವಾಗಿರುವ ಪ್ರಶ್ನೆಗಳಿಗೆ ಕೃಪಾಂಕ ನೀಡಲಾಗುತ್ತದೆ ಎಂಬುದು ನಿಜ. ಆದರೆ, 60ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗುವುದಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ಇರುವ ದೋಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಅರ್ಜಿದಾರರ ಪರ ವಕೀಲ ಕೇಶವ ಭಟ್ ದೂರಿದರು. ವಿಚಾರಣೆ ಮುಂದೂಡಲಾಗಿದೆ.