ವಿಜಾಪುರ: ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರಿಗೆ ರೂ 3.14ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದನ್ನು ವಿರೋಧಿಸಿ, ಎಸ್ಯುಸಿಐ (ಕಮ್ಯೂನಿಸ್ಟ್) ಸಂಘಟನೆಯ ಮುಖಂಡರು ನಗರದ ಗಾಂಧಿ ವೃತ್ತದಲ್ಲಿ ಶುಕ್ರವಾರ ಯು.ಪಿ.ಎ. ಸರ್ಕಾರದ ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿದರು.
ಎಸ್.ಯು.ಸಿ.ಐ.(ಸಿ) ಜಿಲ್ಲಾ ಕಾರ್ಯ ದರ್ಶಿಗಳಾದ ಬಿ. ಭಗವಾನ್ರೆಡ್ಡಿ ಈ ಪ್ರತಿಭ ಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೇಂದ್ರ ಸರ್ಕಾರವು ಪೆಟ್ರೋಲ್ ಹೆಚ್ಚಿಸಿರುವುದು ಜನ ಸಾಮಾನ್ಯರನ್ನು ಅಧೋಗತಿಗೆ ತಳ್ಳಿ, ತೈಲ ಕಂಪೆನಿಗಳಿಗೆ ಅತಿ ಹೆಚ್ಚು ಲಾಭ ಮಾಡಿಕೊಡುವ ಹುನ್ನಾರವಾಗಿದೆ. ಈಗಾಗಲೇ ಬಡತನ, ನಿರುದ್ಯೋಗ, ಬೆಲೆಏರಿಕೆ, ಭ್ರಷ್ಟಾಚಾರಗಳ ಸುಳಿಗೆ ಸಿಕ್ಕು ನಲುಗುತ್ತಿರುವ ದೇಶದ ಜನತೆಗೆ ಈ ತೈಲ ಬೆಲೆ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಈ ಕೂಡಲೇ ಬೆಲೆ ಹೆಚ್ಚಳವನ್ನು ಹಿಂಪಡೆಯಬೇಕೆಂದು ಆಗ್ರಸಿದರು.
ಮತ್ತು ರಾಜ್ಯ ಸರ್ಕಾರಗಳು ತಾವು ಖರೀದಿಸುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅತ್ಯಧಿಕ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಗೊಂಡಿರುವುದೇ ತೈಲ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಹಣದುಬ್ಬರ, ಭ್ರಷ್ಟಾಚಾರ, ಕಾಳಸಂತೆಕೋರರನ್ನು ನಿಯಂತ್ರಿಸಿ ಜೀವನಾವಶ್ಯಕ ವಸ್ತುಗಳ ಬೆಲೆಏರಿಕೆಯನ್ನು ಕಡಿಮೆ ಮಾಡಿ ಹಣದ ಅಪಮೌಲ್ಯವನ್ನು ತಡೆಗಟ್ಟಬೇಕು. ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾವು ಖರೀದಿಸುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅತ್ಯಧಿಕ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕೆಂದು ಹೇಳಿದರು.
ಕಳೆದ ಮೇ 15 ರಂದು ಪೆಟ್ರೋಲ್ ಬೆಲೆಯನ್ನು ಲೀಟರಿಗೆ 5 ರೂಪಾಯಿ ಹೆಚ್ಚಿಸಲಾಗಿತ್ತು. ಕಳೆದ ವರ್ಷ ಜೂನ್ ತಿಂಗಳಲ್ಲಿ ಪೆಟ್ರೋಲ್ ಬೆಲೆಯನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಲಾಗಿತ್ತು ಎಂದರು.
ಎಸ್.ಯು.ಸಿ.ಐ.ನ ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ, ಹೆಚ್ಚಿಸಿರುವ ಪೆಟ್ರೋಲ್ ಬೆಲೆಯನ್ನು ಹಿಂತೆಗೆದು ಕೊಳ್ಳುವವರೆಗೂ ಹೋರಾಟವನ್ನು ಮುಂದುವರೆಸಲು ವಿದ್ಯಾರ್ಥಿ-ಯುವಜನ, ಮಹಿಳೆಯರೂ ಸೇರಿದಂತೆ ಎಲ್ಲರೂ ಸಜ್ಜಾಗಬೇಕು ಎಂದು ಕರೆ ನೀಡಿದರು.
ಎಸ್.ಯು.ಸಿ.ಐ.ನ ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ಸಿದ್ಧಲಿಂಗ ಬಾಗೇವಾಡಿ ಮಾತನಾಡಿದರು. ಉಮೇಶ. ಬಿ.ಆರ್. ಭೀಮು ಉಪ್ಪಾರ, ಸದಾನಂದ ಬಿರಾದಾರ, ವಿದ್ಯಾನಂದ, ಬಸು ಖ್ಯಾದಿ, ಗುರು ಬೊಮ್ಮನಳ್ಳಿ, ಕಾಶೀನಾಥ, ಸಚಿನ, ಚೇತನ, ಶ್ರೀಶೈಲ ಪಾಟೀಲ, ಸಾಗರ, ಅರುಣ ಶಿಂಧೆ ಸೇರಿದಂತೆ ಭಾಗಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.