ಬಳ್ಳಾರಿ: ಬೇಸಿಗೆಯ ಕಾವು ಹೆಚ್ಚುತ್ತಲಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಒಂದೆಡೆ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ದೊರೆಯದೆ ಜನತೆ ತತ್ತರಿಸಿದ್ದಾರೆ. ಇನ್ನೊಂದೆಡೆ ನಗರಕ್ಕೆ ನೀರು ಪೂರೈಸುವ ಪ್ರಮುಖ ಪೈಪ್ಲೈನ್ ಕಳೆದ ವಾರವೇ ನಗರದ ಹೊರ ವಲಯದಲ್ಲಿ ಒಡೆದು ಹೋಗಿದ್ದು, ನೀರು ಪೋಲಾಗುತ್ತಿದೆ.
ಕೊಳಗಲ್ ರಸ್ತೆಯಲ್ಲಿನ ಕೊಂಡಯ್ಯ ನಗರ ಬಳಿ, ವಿಮಾನ ನಿಲ್ದಾಣದ ಎದುರು ಪೈಪ್ಲೈನ್ ಒಡೆದು ಹೋಗಿ ನೀರು ಹಳ್ಳದ ಮೂಲಕ ಹರಿದುಹೋಗುತ್ತಿದೆ.
ಕಳೆದ ಒಂದು ವಾರದಿಂದ ಈ ಪೈಪ್ ಒಡೆದಿದ್ದು, ಜಲಪಾತದ ಮಾದರಿಯಲ್ಲಿ ನೀರು ಹರಿದು ಹಳ್ಳ ಸೇರುತ್ತಿದೆ. ಈ ಕುರಿತು ಪಾಲಿಕೆ ಹಾಗೂ ಜಲಮಂಡಳಿಯ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಆ ಭಾಗದ ಜನತೆ ದೂರುತ್ತಾರೆ. ರಾತ್ರಿ ವೇಳೆಯಲ್ಲಿ ನಿಶ್ಯಬ್ಧ ಇರುವಾಗ ನೀರು ಹರಿಯುವುದು ಜಲಪಾತವನ್ನೇ ನೆನಪಿಸುತ್ತದೆ.