ಚಕ್ಕುಳತಮ್ಮ ದೇವಿ ದೇವಸ್ಥಾನದಲ್ಲಿ ಗುರುವಾರ ಬೆಳಿಗ್ಗೆ 9ರಿಂದ ಪೊಂಗಲ್ ಮಹೋತ್ಸವ, 12ಕ್ಕೆ ಅನ್ನದಾನ, ಸಂಜೆ 6ಕ್ಕೆ ದೀಪಾರಾಧನೆ.
ತುಮಕೂರು ರಸ್ತೆಯ ಮಾದಾವರ ಗ್ರಾಮದ ಬಳಿಯ ಲಕ್ಷ್ಮಿಪುರದ ಚೆಕ್ಕುಳತಮ್ಮ ದೇವಸ್ಥಾನವನ್ನು ಕೇರಳದ ತಿರುವಳ್ಳ ಚೆಕ್ಕುಳತಮ್ಮ ಸಂಜೀವಿನಿ ಆಶ್ರಮ ಚಾರಿಟೆಬಲ್ ಟ್ರಸ್ಟ್ ನಡೆಸುತ್ತಿದೆ. ಕೇರಳ ಮೂಲದ ಚೆಕ್ಕುಳತಮ್ಮ ದೇವಿಯ ಭಕ್ತೆಯೊಬ್ಬರು ಉಚಿತ ನಿವೇಶನ ನೀಡಿದಾಗ ಎಂಟು ವರ್ಷಗಳ ಹಿಂದೆ ಇಲ್ಲಿ ತಾತ್ಕಾಲಿಕ ದೇವಸ್ಥಾನ ಸ್ಥಾಪಿಸಲಾಯಿತು. ಭಕ್ತರ ನೆರವಿನಿಂದ ಕೇರಳ ಮಾದರಿಯ ಶಾಶ್ವತ ದೇವಸ್ಥಾನ ನಿರ್ಮಿಸಲು ಟ್ರಸ್ಟ್ ನಿರ್ಧರಿಸಿದೆ.
ಪ್ರತಿ ವರ್ಷ ಇಲ್ಲಿ ನಡೆಯುವ ಪೊಂಗಲ್ ಮಹೋತ್ಸವ ಅತ್ಯಂತ ವಿಶಿಷ್ಟ. ದೇವಸ್ಥಾನದ ಆವರಣದಲ್ಲಿ ಮಹಿಳೆಯರು ಸೌದೆ ಒಲೆಯ ಮೇಲೆ ಮಣ್ಣಿನ ಮಡಕೆಯಲ್ಲಿ ಸಿಹಿ ಪೊಂಗಲ್ ತಯಾರಿಸಿ ದೇವತೆಗೆ ಅರ್ಪಿಸುತ್ತಾರೆ. ತಿರುವನಂತಪುರ ಬಳಿ ಇರುವ ಅಟ್ಟಕ್ಕಲ್ ಭಗವತಿ ದೇವಸ್ಥಾನದಲ್ಲಿ ಪ್ರತಿವರ್ಷ ಜರುಗುವ ‘ಪೊಂಗಲ್ ಮಹೋತ್ಸವ’ ಜಗತ್ತಿನಲ್ಲೇ ಇಂತಹ ಅತಿ ದೊಡ್ಡ ಉತ್ಸವ ಎಂದು ಹೆಸರು ಪಡೆದಿದೆ. ದೇವಸ್ಥಾನದ ಆವರಣದಲ್ಲಿ, ಸುತ್ತಲ ಪ್ರದೇಶದಲ್ಲಿ ಸಾವಿರಾರು ಮಹಿಳೆಯರು ಪೊಂಗಲ್ ಬೇಯಿಸಿ ದೇವಿಗೆ ಅರ್ಪಿಸುವ ವಿಶಿಷ್ಟ ಉತ್ಸವ ಇದು. ಅದೇ ಮಾದರಿಯಲ್ಲಿ ಇಲ್ಲೂ ಚಕ್ಕುಳತಮ್ಮ ದೇವಸ್ಥಾನದ ಮುಖ್ಯ ಅರ್ಚಕ ರಾಧಾಕೃಷ್ಣ ನಂಬೂದರಿ ಅವರ ನೇತೃತ್ವದಲ್ಲಿ ಈ ಉತ್ಸವ ನಡೆಯಲಿದೆ.
ಸ್ಥಳ: ಶ್ರೀ ನಾರಾಯಣ ನಗರ, ಲಕ್ಷ್ಮಿಪುರ ಗ್ರಾಮ, ತುಮಕೂರು ರಸ್ತೆ.