ಕೋಲಾರ: ಸೈನಿಕರಿಗೆ ನೀಡಿರುವಂತೆ ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರ ನೀಡುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಅಭಿಪ್ರಾಯಪಟ್ಟರು.
ನಗರ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪೊಲೀಸರು ಈಗಲೂ ಬ್ರಿಟಿಷರ ಕಾಲದಲ್ಲಿ ನೀಡಲಾದ ಶಸ್ತ್ರಾಸ್ತ್ರಗಳನ್ನೇ ಬಳಸುತ್ತಿದ್ದಾರೆ. ಆದರೆ ಸೈನಿಕರ ಕೈಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಪ್ರಾಣದ ಹಂಗು ತೊರೆದು ಕಾನೂನು ಸುವಸ್ಯವಸ್ಥೆ ಕಾಪಾಡುವ ಪೊಲೀಸರಿಗೂ ಅಂಥ ಶಸ್ತ್ರಾಸ್ತ್ರ ನೀಡಬೇಕು ಎಂದರು.
ಪೊಲೀಸರು ಕೆಲವು ಗಂಟೆಗಳ ಕಾಲ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೂ ಸಮಾಜದ ಶಾಂತಿಗೆ ಭಂಗ ಬರುತ್ತದೆ. ಕಾನೂನು ಉಲ್ಲಂಘನೆಯೂ ಮಿತಿ ಮೀರುತ್ತದೆ. ಹೀಗಾಗಿ ಪೊಲೀಸರ ಶ್ರಮ ಶ್ಲಾಘನೀಯ ಎಂದರು.
ನಾಗರಿಕ ಹಕ್ಕುಗಳ ಕುರಿತು ಜನರಲ್ಲಿ ಇರುವಷ್ಟು ಕಾಳಜಿ ನಾಗರಿಕ ಜವಾಬ್ದಾರಿಗಳ ಕುರಿತು ಇಲ್ಲ. ಹೀಗಾಗಿಯೇ ನಗರದಲ್ಲಿ ಸಂಚಾರ ನಿಯಮಗಳನ್ನು ಜನ ಉಲ್ಲಂಘಿಸುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂಥ ಸನ್ನಿವೇಶಗಳ ನಿಯಂತ್ರಣದ ಜವಾಬ್ದಾರಿ ಹೊತ್ತು ದಿನದ 24 ಗಂಟೆಯೂ ಕೆಲಸ ಮಾಡುವ ಪೊಲೀಸರಿಗೆ ಕ್ರೀಡಾ ಚಟುವಟಿಕೆಗಳು ಉಲ್ಲಾಸ ನೀಡುತ್ತವೆ. ಕ್ರೀಡಾ ಸ್ಪರ್ಧೆಗಳಲ್ಲಿ ಮಾತ್ರ ಆಸಕ್ತಿ ತೋರದೆ ಪೊಲೀಸರು ದಿನವೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸೆಪಟ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಐ.ಎಂ.ಜಮೀಲ್ ಉಪಸ್ಥಿತರಿದ್ದರು.