ನರಸಿಂಹರಾಜಪುರ: 10 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜನರ ವಿಶ್ವಾಸ ಕಳೆದು ಕೊಂಡಿದ್ದು, ದೇಶದ ಪ್ರಸ್ತುತ ಪರಿಸ್ಥಿತಿಗೆ ತೃತೀಯ ರಂಗ ಅನಿವಾರ್ಯ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ತಿಳಿಸಿದರು.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಕಳೆದು ಕೊಂಡಿದೆ. ಬಿಜೆಪಿ ಜಾತ್ಯಾತೀತ ತತ್ವದಲ್ಲಿ ವಿಶ್ವಾಸವಿಲ್ಲದ ಪಕ್ಷವಾಗಿದ್ದು ಅಧಿಕಾರಕ್ಕೆ ಬರುವುದಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೋದಿ ಪ್ರಧಾನಿ ಆಗಬಾರದೆಂಬುದು ಜಾತ್ಯಾತೀತ ತತ್ವದಲ್ಲಿ ನಂಬಿಕೆಯಿರುವ ಪಕ್ಷಗಳ ನಿಲುವಾಗಿದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಜಾತ್ಯಾತೀತ ತತ್ವದಲ್ಲಿ ನಂಬಿಕೆಯಿಲ್ಲದ, ಆರ್ಎಸ್ಎಸ್ ಅಜೆಂಡಾವನ್ನು ಸಂಪೂರ್ಣ ಅಳವಡಿಸಿ ಕೊಂಡಿರುವ ಸಂಸದರಾಗಿಯೂ ಅನುಭವವಿಲ್ಲದ ಮೋದಿಯನ್ನು ಪ್ರಧಾನಿ ಮಾಡಬೇಕೆಂಬ ಉದ್ದೇಶ ಹೊಂದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅನುಭವ ವಿರುವ ಹಿರಿಯ ಮುಖಂಡರಾದ ಅಡ್ವಾನಿ, ಅರಣ್ ಜೆಟ್ಲಿ ಯನ್ನು ಪಕ್ಷ ಕಡೆಗಣಿಸಿರುವುದು ಸಹ ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿದರು. ಜೆಡಿಎಸ್ ಎಲ್ಲ ಕಡೆಗಳಲ್ಲೂ ಲೋಕಸಭಾ ಚುನಾವಣೆ ಸ್ಪರ್ಧಿಸಲಿದೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಕ್ಷೇತ್ರದ ಸಮಸ್ಯೆಯ ಪರಿಹಾರಕ್ಕೆ ವಿಫಲವಾಗಿವೆ. ಕಸ್ತೂರಿ ರಂಗನ್ ವರದಿಯ ಬಗ್ಗೆ ಕ್ಷೇತ್ರದ ಶಾಸಕರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಜೀವ ವೈವಿಧ್ಯತೆ ತಾಣ, ನೈಸರ್ಗಿಕ ಕೃಷಿ ಅನುಷ್ಟಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದು ದಾಖಲೆ ಪ್ರದರ್ಶಿಸಿದರು. ಬಿಜೆಪಿ ಸರ್ಕಾರ ಜನವಿರೋಧಿ ನೀತಿ ಜಾರಿಗೊಳಿಸಿ ತಾನು ಏನು ತಪ್ಪು ಮಾಡಿಲ್ಲ ಎಂದು ಜನರಿಗೆ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಹಳದಿ ಎಲೆ ರೋಗ ಪೀಡಿತ ತೋಟದ ರೈತರ ಸಮಸ್ಯೆ ಬಗೆಹರಿಸಲು ವಿಫಲವಾಗಿದೆ ಎಂದು ದೂರಿದರು.
ಪಟ್ಟಣ ಪಂಚಾಯಿತಿಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದ ಕಾರಣ ಜೆಡಿಎಸ್ ನ ಸಿದ್ಧಾಂತಕ್ಕೆ ಸಾಮ್ಯತೆ ಇರುವ ಕಾಂಗ್ರೆಸ್ ಗೆ ಬೆಂಬಲ ಸೂಚಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಸಮಾನ ಅಂತರ ಕಾಪಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಹೊಸೂರು ಸುರೇಶ್, ಪ.ಪಂ. ಉಪಾಧ್ಯಕ್ಷ ಅಬ್ದುಲ್ ಸುಬಾನ್, ಕಣಿವೆ ವಿನಯ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.