ಬೆಂಗಳೂರು: ಕೊಡಗು ಜಿಲ್ಲೆಯನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ತಾವು ಇಟ್ಟಿಲ್ಲ. ಪ್ರತ್ಯೇಕ ರಾಜ್ಯ ಬೇಡ ಎಂದು ಹಿಂದೆ ಹೇಳಿದ್ದೇ ತಾವು ಎಂದು ವಿಧಾನಸಭೆಯ ಅಧ್ಯಕ್ಷ ಕೆ.ಜಿ.ಬೋಪಯ್ಯ ಗುರುವಾರ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.
ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ಬೋಪಯ್ಯ ಅವರು ನೀಡಿದ್ದ ಹೇಳಿಕೆ ಕುರಿತು ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ ಗುರುವಾರ ಪ್ರಸ್ತಾಪಿಸಿದರು. ಆಗ ಪ್ರತಿಕ್ರಿಯಿಸಿದ ಸ್ಪೀಕರ್, `ನಾನು ಆ ರೀತಿ ಹೇಳಿಯೇ ಇಲ್ಲ. ಪ್ರತ್ಯೇಕ ರಾಜ್ಯ ಬೇಡ ಎಂದು ಹಿಂದೆ ನಾವೇ ಹೇಳಿದ್ದೇವೆ~ ಎಂದರು.
ಕ್ಷಮೆ ಯಾಚನೆ: ಜೀವಂತವಾಗಿರುವ ರಾಮದುರ್ಗದ ಮಾಜಿ ಶಾಸಕ ಎನ್.ವಿ.ಪಾಟೀಲ ಅವರನ್ನು ಸಾಯಿಸುವ ಕೆಲಸ ಸ್ಪೀಕರ್ ಕಚೇರಿಯಿಂದ ಆಗಿದೆ. ಇನ್ನೂ ಬದುಕಿದ್ದೇವೆ ಎಂದು ಪಾಟೀಲ ಅವರು ಪತ್ರಿಕೆಗಳ ಮೂಲಕ ಹೇಳಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ ಎಂದು ಜಯಚಂದ್ರ ಅವರು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಬೋಪಯ್ಯ, ಮಾಜಿ ಶಾಸಕರ ಕ್ಷಮೆ ಕೋರಿ ಗುರುವಾರವೇ ಅವರಿಗೆ ಪತ್ರ ಬರೆಯಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.
ಸಿದ್ದು- ಮುಖ್ಯ ಸಚೇತಕ: ಬಿಜೆಪಿಯ ತೇರದಾಳ ಶಾಸಕ ಸಿದ್ದು ಸವದಿ ಅವರನ್ನು ಸರ್ಕಾರದ ಮುಖ್ಯ ಸಚೇತಕರನ್ನಾಗಿ ಮುಂದುವರಿಸಲು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತೀರ್ಮಾನಿಸಿದ್ದಾರೆ.
ಈ ವಿಷಯವನ್ನು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಸದನದಲ್ಲಿ ಗುರುವಾರ ಪ್ರಕಟಿಸಿದರು. ಕುಂದಾಪುರ ಕ್ಷೇತ್ರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿಯೂ ಸ್ಪೀಕರ್ ಸಭೆಯ ಗಮನಕ್ಕೆ ತಂದರು.