ನವದೆಹಲಿ: ಕಾವೇರಿ ನದಿಯಿಂದ 9000 ಕ್ಯೂಸೆಕ್ ನೀರು ಬಿಡಬೇಕೆಂಬ `ಕಾವೇರಿ ನದಿ ಪ್ರಾಧಿಕಾರ~ದ ನಿರ್ದೇಶನವನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಲು ಮನಮೋಹನ್ ಸಿಂಗ್ ಅವರನ್ನು ಭಾನುವಾರ ಭೇಟಿ ಮಾಡಲು ಬಯಸಿದ್ದ ಬಿಜೆಪಿ ಸಂಸತ್ ಸದಸ್ಯರಿಗೆ ಪ್ರಧಾನಿ ಕಚೇರಿ ಸಮಯಾವಕಾಶ ನೀಡಿಲ್ಲ.
ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ನೇತೃತ್ವದಲ್ಲಿ ಪ್ರಧಾನಿ ಸಿಂಗ್ ಅವರನ್ನು ಭೇಟಿ ಮಾಡಲು ಬಿಜೆಪಿ ಸಂಸದರು ಉದ್ದೇಶಿಸಿದ್ದರು. ಈ ಸಂಬಂಧ ಪ್ರಧಾನಿ ಕಚೇರಿಗೆ ಅಧಿಕೃತ ಪತ್ರ ಕಳುಹಿಸಲಾಗಿತ್ತು. ಆದರೆ, ಭೇಟಿಗೆ ಸಮಯ ಸಿಕ್ಕಿಲ್ಲ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಸದಸ್ಯ ಪ್ರಹ್ಲಾದ ಜೋಶಿ `ಪ್ರಜಾವಾಣಿ~ಗೆ ತಿಳಿಸಿದರು.
`ಸಮಯ ನಿಗದಿ ಮಾಡಲು ಅನಂತ ಕುಮಾರ್ ಪ್ರಯತ್ನ ನಡೆಸಿದ್ದಾರೆ. ಸೋಮವಾರ ಅವಕಾಶ ಸಿಕ್ಕರೆ ಭೇಟಿ ಮಾಡಿ ಸಿಆರ್ಎ ತೀರ್ಮಾನ ಪುನರ್ ಪರಿಶೀಲಿಸುವಂತೆ ಮನವಿ ಮಾಡಲಾಗುವುದು. ಈ ತೀರ್ಮಾನ ಅವೈಜ್ಞಾನಿಕ. ರಾಜ್ಯದ ರೈತ ವಿರೋಧಿ~ ಎಂದು ಅವರು ಹೇಳಿದರು.