ಬೆಂಗಳೂರು: ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಕಾಣೆಯಾಗಿದ್ದು, ಈ ಸಂಬಂಧ ಅವರ ತಂದೆ ನಂಜುಂಡಪ್ಪ ಅವರು ಇಲ್ಲಿನ ಅಶೋಕನಗರ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.
‘ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿ ನಿವಾಸದಲ್ಲಿ ಕರೆದಿರುವ ಸಭೆಗೆ ಹೋಗುವುದಾಗಿ ತಿಳಿಸಿ ಸೋಮವಾರ (ಡಿ.9) ಬೆಳಿಗ್ಗೆ ಮನೆಯಿಂದ ಹೋಗಿದ್ದ ಮಗ ವಾಪಸ್ ಬಂದಿಲ್ಲ’ ಎಂದು ನಂಜುಂಡಪ್ಪ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ‘ಮಗ, ಯಡಿಯೂರಪ್ಪನವರ ಸಭೆ ಮುಗಿದ ಬಳಿಕ ಮಧ್ಯಾಹ್ನ ಊಟಕ್ಕೆ ಮನೆಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದ. ಆತ ಮೊಬೈಲ್ ಸಹ ತೆಗೆದುಕೊಂಡು ಹೋಗಿಲ್ಲ’ ಎಂದು ನಂಜುಂಡಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇದೇ ರೀತಿ ಆಗಾಗ್ಗೆ ಮನೆಯಿಂದ ಹೊರ ಹೋಗುತ್ತಿದ್ದ ಆತ ಮೂರ್ನಾಲ್ಕು ದಿನಗಳಲ್ಲಿ ವಾಪಸ್ ಬರುತ್ತಿದ್ದ. ಆದರೆ, ಈ ಬಾರಿ ಆರು ದಿನವಾದರೂ ವಾಪಸ್ ಬಂದಿಲ್ಲ ಮತ್ತು ಕರೆ ಸಹ ಮಾಡಿಲ್ಲ’ ಎಂದು ಹೇಳಿದರು.