ಬೆಂಗಳೂರು:`ಪ್ರಸಿದ್ಧ ಲೇಖಕರ ಭಾಷಾ ಪ್ರಯೋಗದಲ್ಲೂ ದೋಷವಿದ್ದು, ಇಂದಿಗೂ ತಪ್ಪಾಗಿ ಬರೆಯುತ್ತಿದ್ದಾರೆ~ ಎಂದು ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.
ನಗರದ ನೃಪತುಂಗ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ `ನಾಡು- ನುಡಿ ಹಬ್ಬ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಇರಲಿ ಅಥವಾ ಇಂಗ್ಲಿಷ್ ಭಾಷೆಯೇ ಇರಲಿ ಅದನ್ನು ಸರಿಯಾಗಿ ಕಲಿತುಕೊಳ್ಳಬೇಕು. ಭಾಷೆಯ ಬಗ್ಗೆ ಆಳವಾದ ಜ್ಞಾನ ಇಲ್ಲದಿದ್ದರೆ ತಪ್ಪುಗಳಾಗುತ್ತವೆ. ಪ್ರಸಿದ್ಧ ಲೇಖಕರೂ ಭಾಷೆಯನ್ನು ತಪ್ಪು ಪ್ರಯೋಗ ಮಾಡುವುದನ್ನು ಗಮನಿಸಿದ್ದೇನೆ. `ಅ~ಕಾರಕ್ಕೆ `ಹ~ಕಾರ ಬಳಸುತ್ತಾರೆ. ಅಲ್ಪಪ್ರಾಣ- ಮಹಾಪ್ರಾಣಗಳಲ್ಲಿಯೂ ತಪ್ಪಿರುತ್ತದೆ ಎಂದರು.
ಕನ್ನಡ ಮಾಧ್ಯಮದ ಬಗ್ಗೆ ಬಹಳ ತಾತ್ಸಾರ ಇದೆ. ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ವಿಷಯಗಳನ್ನು ಅರ್ಥ ಮಾಡಿಸಬಹುದು. ಪಾರಿಭಾಷಿಕ ಪದಗಳ ಬಗ್ಗೆ ಹೆಚ್ಚು ಗಮನ ಕೊಡಬೇಕಾದ ಅಗತ್ಯ ಇಲ್ಲ. ಕೆಲ ಇಂಗ್ಲಿಷ್ ಪದಗಳನ್ನು ಬಳಸಿಕೊಂಡರೆ ತಪ್ಪಲ್ಲ. ನಿಜಾಮನ ಕಾಲದಲ್ಲಿ ವೈದ್ಯಕೀಯ ವಿಜ್ಞಾನಉರ್ದುವಿನಲ್ಲಿ ಬೋಧಿಸಲಾಗುತ್ತಿತ್ತು ಎಂದರು.
ಅಭಿಮಾನದ ಕೊರತೆ ಮತ್ತು ವಿರೋಧಿ ಶಕ್ತಿಗಳಿಂದಾಗಿ ಕನ್ನಡ ಅಳಿವಿನಂಚಿನಲ್ಲಿದೆ. ಕನ್ನಡ ನಾಡು ಸಹ ಸಂಕುಚಿತವಾಗುವ ಅಪಾಯ ಇದೆ. ಕನ್ನಡಿಗರು ಭಾಷೆಯ ಬಗ್ಗೆ ಶಾಶ್ವತ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡದ ಪ್ರಜ್ಞೆ ಬೆಳೆಸಿಕೊಳ್ಳುವುದು ಮತ್ತು ಒಗ್ಗಟ್ಟು ಸಹ ಮುಖ್ಯ ಎಂದು ಅವರು ಕಿವಿ ಮಾತು ಹೇಳಿದರು.
ವಕೀಲ ನೀಲಕಂಠನಹಳ್ಳಿ ಪುಟ್ಟೇಗೌಡ ತಮ್ಮಣ್ಣಗೌಡ, ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ.ಎಂ. ಮಹದೇವರಾಜು, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಟಿ.ಎಂ. ದೇವರಾಜು ಮತ್ತಿತರಿದ್ದರು.