ಗದಗ: ಆಧುನಿಕ ಜಗತ್ತಿನಲ್ಲಿ ಪ್ರಾಣಿ, ಪಕ್ಷಿಗಳ ಸಂಕುಲ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.
ಸಮೀಪದ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ಮಂಗಳವಾರ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಪ್ರಾಣಿ ದತ್ತು ತೆಗೆದು ಕೊಳ್ಳುವ ಕಾರ್ಯಕ್ರಮ, ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಗುಬ್ಬಿ, ಹಾವು, ಚೇಳು, ರಣಹದ್ದು, ಪಾರಿವಾಳ, ನರಿ, ಬಾವಲಿಗಳ ಸಂತತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಮನುಷ್ಯನ ದುಷ್ಟ ವಿಚಾರ ಹಾಗೂ ಆಧುನಿಕ ತಂತ್ರಜ್ಞಾನದ ಕ್ರಿಮಿನಾಶಕ ಬಳಕೆಯೇ ಇದಕ್ಕೆ ಕಾರಣವಾಗಿದೆ ಎಂದರು.
ಕಪ್ಪತಗುಡ್ಡದಲ್ಲಿ ಪರಿಸರ ಹಾಳುಗುವ ಸ್ಥಿತಿ ಇದೆ. ಪ್ರಾಣಿ, ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ. ಪ್ರಾಣಿ ಸಂಗ್ರಹಾಲಯದ ಅಭಿವೃದ್ಧಿ ಬಹಳ ದಿನಗಳಿಂದ ಕುಂಠಿತವಾಗಿದೆ. ಇದರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸ ಬೇಕು. ಹುಟ್ಟುಹಬ್ಬದಂತಹ ಆಚರಣೆ ಗಳಲ್ಲಿ ಸಸಿ ನೆಡುವ, ಪ್ರಾಣಿ, ಪಕ್ಷಿ ಗಳನ್ನು ದತ್ತು ತೆಗೆದುಕೊಳ್ಳುವಂತಹ ಪರಿಪಾಠ ಬೆಳೆದು ಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶ್ರೀಶೈಲಪ್ಪ ಬಿದರೂರ ಮಾತನಾಡಿ, ಪರಿಸರ ಸಂರಕ್ಷಣೆ, ಪ್ರಾಣಿ ಸಂಗ್ರಹಾ ಲಯದ ಅಭಿವೃದ್ಧಿಯಲ್ಲಿ ಸಾರ್ವಜ ನಿಕರ ಸಹಭಾಗಿತ್ವ ಅಗತ್ಯವಾಗಿ ಬೇಕು. ಪ್ರಾಣಿ ಸಂಗ್ರಹಾಲಯ ಎಲ್ಲರ ಆಸ್ತಿ ಯಾಗಿದೆ. ಅದನ್ನು ಉಳಿಸಿ ಬೆಳೆಸುವ ಪ್ರಯತ್ನ ಎಲ್ಲರದ್ದಾಗಬೇಕು. ಈ ನಿಟ್ಟಿನಲ್ಲಿ ಇಲ್ಲಿರುವ ಪ್ರಾಣಿ, ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ವಿಶಿಷ್ಟವಾಗಿದೆ. ಇದೊಂದು ಆಂದೋ ಲನವಾಗಿ ಪರಿವರ್ತನೆಗೊಳ್ಳಬೇಕು. ಜನಪರ ಕಾರ್ಯವಾಗಬೇಕು ಎಂದು ಹೇಳಿದರು.
ಜಿಲ್ಲಾ ಅರಣ್ಯಾಧಿಕಾರಿ ಮನೋಜ ತ್ರಿಪಾಠಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಮೈಸೂರು ಮೃಗಾಲಯ ಹೊರತು ಪಡಿಸಿದರೆ, ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದ ದೊಡ್ಡದಾಗಿದೆ. ಇದರ ಅಭಿವೃದ್ಧಿ ಸರ್ಕಾರ ಅಥವಾ ಪ್ರಾಧಿಕಾರದಿಂದ ಸಾಧ್ಯವಿಲ್ಲ. ಜನರ ಸಹಕಾರವು ಬೇಕು. ಇಲ್ಲಿನ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಸಂಸ್ಕಾರ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಪ್ರಾಣಿ ಸಂಗ್ರಹಾಲಯ ಎಂಬ ಭಾವನೆ ಬೆಳೆದು ಬರುತ್ತದೆ ಎಂದರು.
ಸಚಿವ ಕಳಕಪ್ಪ ಬಂಡಿ ಅವರ ಪತ್ನಿ ಸಂಯುಕ್ತ ಬಂಡಿ ಅವರು 1 ಚಿರತೆ ದತ್ತು ಪಡೆದು 35 ಸಾವಿರ ರೂಪಾಯಿ, ಮಹೇಶ್ವರಿ ಶ್ರೀ. ಬಿದರೂರ 12 ಕೃಷ್ಣಮೃಗ ದತ್ತು ಪಡೆದು 42 ಸಾವಿರ, ಶೋಭಾ ಸಿ. ಪಾಟೀಲ 8 ಮೊಸಳೆ ದತ್ತು ಪಡೆದು 28 ಸಾವಿರ ಸೇರಿ 28 ಜನರು ವಿವಿಧ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದು ಒಟ್ಟು 1.81 ಲಕ್ಷ ರೂಪಾಯಿಗಳ ಚೆಕ್ಗಳನ್ನು ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದರು.
ಬಸವರಾಜ ಕೊರ್ಲಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಚ್. ಮಾಲಿಗೌಡರ, ಬಿ.ಎಂ. ಪಾಟೀಲ, ಮೂಲಿಮನಿ, ಪ್ರದೀಪ ನವಲಗುಂದ, ಶ್ರೀನಿವಾಸ ಹುಬ್ಬಳ್ಳಿ, ಮಲ್ಲಿಕಾರ್ಜುನ ಕಿತ್ತೂರ, ಮಂಜಪ್ಪ ಹಾವನೂರ, ಭಾರತಿ ಕೊಟ್ನಿಕಲ್, ಡಿ.ವೈ. ಹೊಸಮನಿ, ಆನಂದ ಮತ್ತಿತರರು ಹಾಜರಿದ್ದರು. ಎಸಿಎಫ್ ಶಂಕರ ನಿರೂಪಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.