ಬೆಂಗಳೂರು: ‘ಅತಿಥಿ ಉಪನ್ಯಾಸಕರಿಗೆ ಪ್ರಾಧ್ಯಾಪಕರ ವೇತನಕ್ಕೆ ಸಮನಾದ ಗೌರವ ಧನ ನೀಡಲು ಪ್ರಯತ್ನಿಸಲಾಗುವುದು’ ಎಂದು ಸಚಿವ ಆರ್.ವಿ.ದೇಶಪಾಂಡೆ ಭರವಸೆ ನೀಡಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಗುರುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್, ಎನ್ಸಿಸಿ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು. ‘ಅತಿಥಿ ಉಪನ್ಯಾಸಕರ ನೇಮಕಾತಿ ಪಾರದರ್ಶಕವಾಗಿರಬೇಕೆಂಬ ಉದ್ದೇಶದಿಂದ ಈ ಬಾರಿ ಆನ್ ಲೈನ್ ನೇಮಕಾತಿಯನ್ನು ಜಾರಿ ಮಾಡಲಾಗಿದೆ’ ಎಂದ ಅವರು, ‘ ಅತಿಥಿ ಉಪನ್ಯಾಸಕ ಹುದ್ದೆಗೆ ಸುಮಾರು 34,900 ಮಂದಿ ಅರ್ಜಿ ಹಾಕಿದ್ದರು. ನೀಡುತ್ತಿರುವ ಗೌರವಧನ ಕಡಿಮೆಯಿದ್ದರೂ ಸಹ, ಅರ್ಜಿ ಹಾಕಿದವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. ಇದು ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವ ಅಂಶವನ್ನು ಸೂಚಿಸುತ್ತದೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ ಕೇವಲ 17 ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ. ಈ ವರ್ಷದಿಂದ ಪದವಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೂ ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ಸಾಲ ನೀಡಿ, ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ’ ಎಂದರು.
‘ತಮ್ಮದೇ ಒಂದು ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲೆಯಲ್ಲಿ ಅನುತ್ತೀರ್ಣರಾದ, ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ ತರಬೇತಿ ನೀಡಲಾಗಿದ್ದು, ಅವರಲ್ಲಿ ಶೇ 71ರಷ್ಟು ಮಂದಿ ಸ್ವ ಉದ್ಯೊಗಿಗಳಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಲಲಿತಮ್ಮ ಅವರು ಪ್ರಸ್ತಾಪಿಸಿದ ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾಲೇಜಿನಲ್ಲಿ ಆರಂಭಿಸಲು ಉದ್ದೇಶಿಸಿರುವ ಅಧ್ಯಯನ ಕೇಂದ್ರ ಕುರಿತ ಪ್ರಸ್ತಾವನೆಯನ್ನು ಪರಿಶೀಲಿಸಿ, ಮಂಜೂರು ಮಾಡುವುದಾಗಿ ಹೇಳಿದರು. ಜತೆಗೆ, ಸುಸಜ್ಜಿತ ಸಭಾಂಗಣ, ಹೊಸ ವಸತಿ ನಿಲಯದ ಬೇಡಿಕೆಗಳನ್ನು ಸೂಕ್ತವೆಂದು ಪರಿಗಣಿಸಲಾಗುವುದು ಎಂದರು.
ಶಾಸಕ ಪುಟ್ಟಣ್ಣ, ‘ಅತಿಥಿ ಉಪನ್ಯಾಸಕರ ವೇತನವನ್ನು ರೂ 25 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದ ಅವರು ‘ಸಭಾಂಗಣ ನಿರ್ಮಾಣಕ್ಕೆ ತಮ್ಮ ಅನುದಾನದಿಂದ ರೂ 25 ಲಕ್ಷ ಒದಗಿಸುವುದಾಗಿ ತಿಳಿಸಿದರು. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಬಿ.ಜಿ.ನಂದಕುಮಾರ್, ಸಾಹಿತಿ ಪ್ರೊ ಜಿ.ಕೆ.ಗೋವಿಂದರಾವ್ ಇತರರಿದ್ದರು.