ಧಾರವಾಡ: ಆಕೆಯನ್ನು ಬಿಟ್ಟು ಆತನಿರಲಾರ, ಆತನನ್ನು ಬಿಟ್ಟು ಆಕೆಯೂ ಇರಲಾರಳು. ಹೆಣ್ಣಿನ ಮನೆಯಲ್ಲಿ ಕೊಂಚ ವಿರೋಧ. ತಮ್ಮ ಪ್ರೇಮವು ಮದುವೆಯ ರೂಪದಲ್ಲಿ ಮುಂದುವರೆಯಬೇಕು ಎಂದು ಬಯಸಿದ ಆ ಯುವ ಪ್ರೇಮಿಗಳಿಗೆ ಪೌರೋಹಿತ್ಯ ವಹಿಸಿದ್ದು ಇಲ್ಲಿಯ ಉಪನಗರ ಠಾಣೆಯ ಪೊಲೀಸ್ ಸಿಬ್ಬಂದಿ!
ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬ ಮಾತಿಗೆ ಪೂರಕವಾಗಿ ಈ ಮದುವೆಗೆ ಯಾವ ದೊಡ್ಡ ಕಲ್ಯಾಣಮಂಟಪವೂ ಬೇಕಾಗಲಿಲ್ಲ. ಪೊಲೀಸ್ ಠಾಣೆಯೇ ಕಲ್ಯಾಣಮಂಟಪವಾಗಿತ್ತು.
ನಗರದ ಕೊಪ್ಪದಕೇರಿಯ ಸವಿತಾ (23) ಮತ್ತು ಯಲ್ಲಪ್ಪ (27) ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಯುವತಿಯ ಕಡೆಯವರಿಂದ ವಿರೋಧವಿತ್ತು. ಅದಕ್ಕಾಗಿ ಪೊಲೀಸ್ ಠಾಣೆ ಏರಿದ ಈ ಪ್ರೇಮಿಗಳು ತಾವು ಮದುವೆಯಾಗುವ ನಿರ್ಧಾರವನ್ನು ಹೇಳಿದರು.
ಬುಧವಾರ ಯುವಕ ಹಾಗೂ ಯುವತಿಯ ತಂದೆ–ತಾಯಿಗಳನ್ನು ಬರಹೇಳಿದ ಇನ್ಸ್ಪೆಕ್ಟರ್ ರಾಮನಗೌಡ ಹಟ್ಟಿ, ‘ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಬಗ್ಗೆ ಏನಾದರೂ ತಕರಾರುಗಳಿದ್ದರೆ ತಿಳಿಸಿ’ ಎಂದು ಕೇಳಿದರು.
ಇದಕ್ಕೆ ಯುವಕನ ಕಡೆಯವರಿಂದ ತಕರಾರು ಬರಲಿಲ್ಲ. ಆದರೆ, ಆ ಯುವಕನಿಗೆ ಮಗಳನ್ನು ಕೊಡುವುದು ಇಷ್ಟ ಇಲ್ಲ ಎಂದು ಯುವತಿಯ ಕಡೆಯವರು ಹೇಳಿದರು.
‘ಆದರೆ, ಇಬ್ಬರೂ ಮದುವೆಯಾಗಲು ಅಗತ್ಯವಾದ ವಯೋಮಾನದವರಾಗಿದ್ದು, ಅವರು ಇಷ್ಟಪಟ್ಟಂತೆ ಮದುವೆ ಮಾಡಿಕೊಳ್ಳಬಹುದು’ ಎಂದು ಪೊಲೀಸರು ಯುವತಿಯ ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟರು.
ನಂತರ ಇಬ್ಬರೂ ಪ್ರೇಮಿಗಳು ಹಾರ ಬದಲಾಯಿಸಿಕೊಂಡು ಮದುವೆ ಮಾಡಿಕೊಂಡರು.
ಡಿ 19ರಂದು (ಇಂದು) ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿ ಮದುವೆ ನೋಂದಣಿ ಮಾಡಿಸಿ, ಅದರ ದಾಖಲೆಗಳನ್ನು ತಮಗೆ ತೋರಿಸಬೇಕು. ಯುವತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಪೊಲೀಸರು ಯುವಕನಿಗೆ ತಾಕೀತು ಮಾಡಿ ಕಳಿಸಿದರು.
ಠಾಣೆಯಲ್ಲಿ ಬರೀ ಕೊಲೆ, ದರೋಡೆಯಂತಹ ಪ್ರಕರಣಗಳನ್ನೇ ಕೇಳಿದ್ದ ಪೊಲೀಸರಿಗೆ ಈ ಮದುವೆ ಬೇರೆಯದೇ ಆದ ಅನುಭವವನ್ನು ನೀಡಿತು.