ಬೆಂಗಳೂರು: ವಿ.ಕೆ. ಗಿರೀಶ್ ತಂದಿತ್ತ ಏಕೈಕ ಗೋಲಿನ ನೆರವಿನಿಂದ ಎಂಇಜಿ ತಂಡ ಸಿ. ಪುಟ್ಟಯ್ಯ ಸ್ಮಾರಕ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಎಂಇಜಿ 1-0 ರಲ್ಲಿ ಎಚ್ಎಎಲ್ ವಿರುದ್ಧ ಜಯ ಸಾಧಿಸಿತು. ಪಂದ್ಯದ 90ನೇ ನಿಮಿಷದಲ್ಲಿ ಹೆಡರ್ ಮೂಲಕ ಚೆಂಡನ್ನು ಆಕರ್ಷಕ ರೀತಿ ಯಲ್ಲಿ ಗುರಿ ಸೇರಿಸಿದ ಗಿರೀಶ್ ಎಂಇಜಿ ಗೆಲುವಿನ ರೂವಾರಿ ಎನಿಸಿಕೊಂಡರು.
ಪಂದ್ಯದ ಇಂಜುರಿ ಅವಧಿಯಲ್ಲಿ (90+2) ಎಚ್ಎಎಲ್ಗೆ ಪೆನಾಲ್ಟಿ ಕಿಕ್ ಅವಕಾಶ ಲಭಿಸಿತು. ಎಂಇಜಿ ತಂಡದ ಸುಮನ್ ಕುಮಾರ್ ಚೆಂಡನ್ನು ಕೈಯಿಂದ ತಡೆದದ್ದಕ್ಕೆ ರೆಫರಿ ಪೆನಾಲ್ಟಿ ವಿಧಿಸಿದರು.
ಆದರೆ ಪೆನಾಲ್ಟಿ ಕಿಕ್ ಅವಕಾಶದಲ್ಲಿ ಮುರಳಿ ಒದ್ದ ಚೆಂಡು ಗೋಲುಕಂಬಕ್ಕೆ ಬಡಿದು ಹೊರಕ್ಕೆ ಹೋಯಿತು. ಎಂಇಜಿ ಆಟಗಾರರು ಗೆಲುವಿನ ಸಂಭ್ರಮ ಆಚರಿಸಿದರೆ, ಎಚ್ಎಎಲ್ ತಂಡದವರು ನಿರಾಸೆಯೊಂದಿಗೆ ಅಂಗಳ ತೊರೆದರು.
ಎಸ್ಎಐಗೆ ಪ್ರಶಸ್ತಿ: ‘ಎ’ ಡಿವಿಷನ್ ತಂಡಗಳಿಗಾಗಿ ನಡೆದ ಪ್ರಸನ್ನಕುಮಾರ್ ಸ್ಮಾರಕ ಟೂರ್ನಿಯ ಕಿರೀಟವನ್ನು ಎಸ್ಎಐ ಗೆದ್ದುಕೊಂಡಿತು.
ಭಾನುವಾರ ನಡೆದ ಫೈನಲ್ನಲ್ಲಿ ಎಸ್ಎಐ 2-1 ಗೋಲುಗಳಿಂದ ಡಿವೈಇಎಸ್ ತಂಡವನ್ನು ಮಣಿಸಿತು.