ಕೊಪ್ಪಳ: ಜೆಡಿಎಸ್ ಆಯೋಜಿಸಿರುವ ಯುವ ಚೇತನ ಪ್ರವಾಸ ಎಂಬ ಪಕ್ಷದ ಸಂಘಟನಾ ರ್ಯಾಲಿ ಫೆ. 24ರಂದು ನಗರದ ಗವಿಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ನಗರದಲ್ಲಿ ಮಂಗಳವಾರ ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಪ್ರದೀಪಗೌಡ ಮಾಲಿಪಾಟೀಲ ಈ ವಿಷಯ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನಟಿ ಹಾಗೂ ಪಕ್ಷದ ನಾಯಕಿ ಪೂಜಾ ಗಾಂಧಿ, ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಪಾಲ್ಗೊಳ್ಳುವರು ಎಂದು ಹೇಳಿದರು.
ಅಂದು ಬೆಳಿಗ್ಗೆ 11 ಗಂಟೆಗೆ ಬನ್ನಿಕಟ್ಟಿ ಬಳಿಯ ಗೌರಿಶಂಕರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಆರಂಭಗೊಳ್ಳುವ ಮೆರವಣಿಗೆ ಗವಿಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಮುಕ್ತಾಯಗೊಂಡು ಸಮಾವೇಶವಾಗಿ ಪರಿವರ್ತನೆಗೊಳ್ಳುವುದು ಎಂದು ಹೇಳಿದರು.
ವಿವಿಧ ಹಂತಗಳಲ್ಲಿ ಪಕ್ಷವನ್ನು ಬಲಪಡಿಸುವ ಸಂಬಂಧ ರಾಜ್ಯಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಂದು ವಿವಿಧ ಪಕ್ಷಗಳ ಕಾರ್ಯಕರ್ತರು ಜೆಡಿಎಸ್ಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಕೆ.ಎಂ.ಸೈಯದ್, ವೀರೇಶ ಮಹಾಂತಯ್ಯನಮಠ, ಜಗದೀಶಗೌಡ ತೆಗ್ಗಿನಮನಿ, ರಮೇಶ ಗೌಡ, ಶೇಖಣ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.