ಶಿವಮೊಗ್ಗ: ಅಭಿಷೆಕ್ ಯೆಲಿಗಾರ್ ಇಲ್ಲಿ ನಡೆಯುತ್ತಿರುವ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದರು.
ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಭಿಷೇಕ್ 19–21, 21–13, 21–16 ರಲ್ಲಿ ಅಗ್ರಶ್ರೇಯಾಂಕದ ಆಟಗಾರ ರೋಹನ್ ಕ್ಯಾಸ್ಟಲಿನೊಗೆ ಆಘಾತ ನೀಡಿದರು.
ಮೂರನೇ ಶ್ರೇಯಾಂಕದ ಅಭಿಷೇಕ್ ಫೈನಲ್ನಲ್ಲಿ ಕೆ. ಪ್ರಕಾಶ್ ಜಾಲಿ ಅವರ ಸವಾಲನ್ನು ಎದುರಿಸಲಿದ್ದಾರೆ. ದಿನದ ಮತ್ತೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಪ್ರಕಾಶ್ 21–17, 21–10 ರಲ್ಲಿ ಎಸ್. ಡೇನಿಯಲ್ ಫರೀದ್ ಅವರನ್ನು ಮಣಿಸಿದರು.
ಅರ್ಶೀನ್ ಸಯೀದಾ ಸಾದತ್ ಹಾಗೂ ಜಾಕ್ವೆಲಿನ್ ರೋಸ್ ಕುನ್ನತ್ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.
ಸೆಮಿಫೈನಲ್ ಪಂದ್ಯಗಳಲ್ಲಿ ಅರ್ಶೀನ್ 21–15, 21–11 ರಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಮೀರಾ ಮಹಾದೇವನ್ಗೆ ಆಘಾತ ನೀಡಿದರೆ, ಜಾಕ್ವೆಲಿನ್ 21–19, 21–9 ರಲ್ಲಿ ಮಹಿಮಾ ಅಗರ್ವಾಲ್ ಅವರನ್ನು ಮಣಿಸಿದರು.
ಶಿಖಾ ಗೌತಮ್ ಮತ್ತು ಮಹಿಮಾ ಅಗರ್ವಾಲ್ ಬಾಲಕಿಯರ 19 ವರ್ಷ ವಯಸ್ಸಿನೊಳಗಿನವರ ವಿಭಾಗದ ಫೈನಲ್ಗೆ ಲಗ್ಗೆಯಿಟ್ಟರು. ನಾಲ್ಕರಘಟ್ಟದ ಪಂದ್ಯಗಳಲ್ಲಿ ಶಿಖಾ 21–11, 21–9 ರಲ್ಲಿ ಮೀರಾ ವಿರುದ್ಧವೂ, ಮಹಿಮಾ 21–13, 21–16 ರಲ್ಲಿ ಅರ್ಶೀನ್ ಎದುರೂ ಜಯ ಸಾಧಿಸಿದರು.
ಬಾಲಕರ 19 ವರ್ಷ ವಯಸ್ಸಿನೊಳಗಿನವರ ವಿಭಾಗದ ಪ್ರಶಸ್ತಿಗಾಗಿ ಹರ್ಷಿತ್ ಅಗರ್ವಾಲ್ ಹಾಗೂ ಡೇನಿಯಲ್ ಫರೀದ್ ಪೈಪೋಟಿ ನಡೆಸಲಿದ್ದಾರೆ.
ಸೆಮಿಫೈನಲ್ ಪಂದ್ಯಗಳಲ್ಲಿ ಹರ್ಷಿತ್ 21–16, 21–12 ರಲ್ಲಿ ಕೆ. ಗೋವರ್ಧನ್ ಶೆಣೈ ಎದುರೂ, ಡೇನಿಯಲ್ 9–21, 21–16, 26–24 ರಲ್ಲಿ ಬಿ.ಆರ್. ಸಂಕೀರ್ತ್ ವಿರುದ್ಧವೂ ಗೆಲುವು ಸಾಧಿಸಿದರು.