ಮಾಲೂರು: ಅಪರಾಧ ತಡೆಯುವಲ್ಲಿ ನಾಗರಿಕರ ಸಹಕಾರಕ್ಕಾಗಿ ಪೊಲೀಸ್ ಇಲಾಖೆಯು ನೀಡುತ್ತಿರುವ ಬಂದೂಕು ತರಬೇತಿಯಲ್ಲಿ ಹೆಚ್ಚಾಗಿ ಮಹಿಳೆಯರೇ ಪಾಲ್ಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು.
ಪಟ್ಟಣದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ನಡೆದ ನಾಗರಿಕ ಬಂದೂಕು ತರಬೇತಿ ಪತ್ರ ವಿತರಣೆ, ಪೊಲೀಸ್ ಕವಾಯತು ಮೈದಾನ ಉದ್ಘಾಟನೆ, ಪೊಲೀಸ್ ಸಿಬ್ಬಂದಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ತ್ಯಾಗರಾಜನ್ ಮಹಿಳೆಯರ ಈ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆತ್ಮ ರಕ್ಷಣೆಗಾಗಿ ಬಂದೂಕು ತರಬೇತಿ ಶಿಬಿರದಲ್ಲಿ 20 ಮಹಿಳೆಯರು ಭಾಗವಹಿಸಿ ಉತ್ತಮ ಕಲಿಕೆ ದಾಖಲಿಸಿದ್ದಾರೆ. ದಿನನಿತ್ಯ ನಡೆಯುವ ಅಪರಾಧ ಚಟುವಟಿಕೆಗಳನ್ನು ತಡೆಯಲು ಮಹಿಳೆಯರು ಮುಂದಾಗಬೇಕು ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಸಿ.ಸಂಪತ್ ಕುಮಾರ್, ಶಸಸ್ತ್ರ ಮೀಸಲು ಪಡೆ ಸರ್ಕಲ್ ಇನ್ಸ್ಪೆಕ್ಟರ್ ಎ.ನಾಗರಾಜ್, ಸಹಾಯಕ ಇನ್ಸ್ಪೆಕ್ಟರ್ ಶಿವಶಂಕರ್ಗೌಡ, ಉಪ ನಿರೀಕ್ಷಕರಾದ ನದಾಫ್ ಸಿ.ಸಲೀಂ, ಶಿವಶಂಕರ್, ಕನಕ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಕೃಷ್ಣಮೂರ್ತಿ ಭಾಗವಹಿಸಿದ್ದರು.