ಬೀಳಗಿ: `ಕೃಷ್ಣಾ ನೀರಿನ ಸಮಸ್ಯೆ ಸೇರಿದಂತೆ ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಮೈಸೂರು ಭಾಗದ ಜನರು ಎಂದಿಗೂ ಸ್ಪಂದಿಸಿಲ್ಲ. ಆದ್ದರಿಂದ ಈಗ ಕಾವೇರಿ ಕುರಿತು ನೀಡಿರುವ ಕರ್ನಾಟಕ ಬಂದ್ಗೆ ನಮ್ಮ ಬೆಂಬಲ ಇಲ್ಲ` ಎಂದು ತಾಲ್ಲೂಕು ಜೆಡಿ (ಎಸ್) ಕಾರ್ಯದರ್ಶಿ ಸಿದ್ದು ದಳವಾಯಿ ಹಾಗೂ ಕಾಂಗ್ರೆಸ್ ಯುವ ಮುಖಂಡ ಶ್ರೀಶೈಲ ತುಮ್ಮರಮಟ್ಟಿ ತಿಳಿಸಿದ್ದಾರೆ.
`ಈ ಹಿಂದೆ ಕಾವೇರಿ ನೀರಿನ ವಿವಾದ ಜಟಿಲಗೊಂಡ ಸಂದರ್ಭದಲ್ಲಿ ಉತ್ತರ ಕರ್ನಾಟಕದರಾದ ನಾವೆಲ್ಲ ಬೆಂಬಲಿಸಿದ್ದೇವೆ. ರಸ್ತೆ ತಡೆ, ಟೈರ್ ಸುಟ್ಟು, ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿ, ಜೈಲು ಕಂಬಿ ಎಣಿಸಿ ಬಂದಿದ್ದೇವೆ.
ಆದರೆ ಕಾವೇರಿ ನದಿಯ ಫಲಾನುಭವಿಗಳು ಕೃಷ್ಣೆಗಾಗಿ ಒಂದೇ ಒಂದು ಬಾರಿ ನಮ್ಮಡನೆ ಕೂಗು ಹಾಕಿದ್ದಾರೆಯೇ, ನಮ್ಮಡನೆ ಕೈ ಜೋಡಿಸಿದ್ದಾರೆಯೇ` ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
`ಕಾವೇರಿ ನದಿ ಮೈಸೂರು ಭಾಗದ ನಾಲ್ಕಾರು ಜಿಲ್ಲೆಗಳಿಗೆ ಹೇಗೆ ಜೀವನದಿಯೋ ಹಾಗೆಯೇ ಕೃಷ್ಣಾ ನದಿ ಉತ್ತರ ಕರ್ನಾಟಕದ ಹತ್ತಾರು ಜಿಲ್ಲೆಗಳಿಗೆ ಜೀವನದಿಯಾಗಿದೆ ಎಂಬುದು ಅವರ ಗಮನಕ್ಕಿಲ್ಲವೇ` ಎಂದು ಪ್ರಶ್ನಿಸಿದರು.