ಕೋಲಾರ: ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ನಗರದಲ್ಲಿ ಸೋಮವಾರ ಬೈಕ್ ರ್ಯಾಲಿ ನಡೆಸಿದ ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ರಾಷ್ಟ್ರೀಯ ಹೆದ್ದಾರಿ 4ರ ಸಮೀಪ ತಡೆದು ನಿಲ್ಲಿಸಿದರು.
ಕಾರ್ಯಕರ್ತರು ನಗರದ ದೇವರಾಜ ಅರಸು ವೈದ್ಯಕೀಯ ಕಾಲೇಜಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ, ಪ್ರೇಮಿಗಳ ದಿನಾಚರಣೆಯಲ್ಲಿ ಪಾಲ್ಗೊಳ್ಳಬಾರದು ಎಂದು ಆಗ್ರಹಿಸುವ ಪ್ರಯತ್ನ ನಡೆಸಿದರು. ನಂತರ ಹೊರಬಂದು ಹೆದ್ದಾರಿ ಮೂಲಕ ನಗರಕ್ಕೆ ವಾಪಸು ತೆರಳುವಾಗ ಅವರನ್ನು ಹಿಂಬಾಲಿಸಿದ ಪೊಲೀಸರು ಎಲ್ಲರನ್ನೂ ಒಂದೇ ಸ್ಥಳದಲ್ಲಿ ತಡೆದರು.
ರ್ಯಾಲಿ ಮಾಡಬಾರದು, ಪ್ರೇಮಿಗಳಿಗೆ ಅನಗತ್ಯವಾಗಿ ತೊಂದರೆ ನೀಡಬಾರದು ಎಂಬ ಸ್ಪಷ್ಟ ಸೂಚನೆಯನ್ನು ಪೊಲೀಸರು ನೀಡಿದರು. ಕಾರ್ಯಕರ್ತರು ಬಳಸುತ್ತಿದ್ದ ವಾಹನಗಳ ದಾಖಲೆ ಪತ್ರಗಳು ಮತ್ತು ವಾಹನ ಚಾಲನಾ ಪರವಾನಗಿಯನ್ನು ಇದೇ ಸಂದರ್ಭದಲ್ಲಿ ಪರಿಶೀಲನೆ ನಡೆಸಿದ ಪೊಲೀಸರ ಪ್ರಯತ್ನ ಯಶಸ್ವಿಯಾಗಲಿಲ್ಲ.
ಕಾರ್ಯಕರ್ತರಲ್ಲಿ ಯಾರ ಬಳಿಯೂ ದಾಖಲೆ ಪತ್ರಗಳಿರಲಿಲ್ಲ. ಹೀಗಾಗಿ, ಎಲ್ಲ ವಾಹನಗಳ ನೋಂದಣಿ ಸಂಖ್ಯೆಯನ್ನು ಬರೆದುಕೊಂಡ ಪೊಲೀಸರು ಎಚ್ಚರಿಕೆ ನೀಡಿ ನಂತರ ಬಿಟ್ಟರು. ಬಜರಂಗದಳದ ಮುತಾಲಿಕ್, ವಿನಯ್ ನೇತೃತ್ವ ವಹಿಸಿದ್ದರು. ಬಂದ್ ಪರಿಣಾಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ್ದ ಕಾರಣ ಯುವಜನರು ಮನೆಗಳಿಂದ ಹೊರಗೆ ಬಂದಿರಲಿಲ್ಲ.