ನವದೆಹಲಿ (ಪಿಟಿಐ): ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಶನಿವಾರ ಇಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಡಿ. ಸುಬ್ಬರಾವ್, ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷ ಯು.ಕೆ ಸಿನ್ಹಾ ಸೇರಿದಂತೆ ಪ್ರಮುಖ ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಜತೆ ಬಜೆಟ್ ಪೂರ್ವ ಚರ್ಚೆ ನಡೆಸಿದರು.
ಬ್ಯಾಂಕಿಂಗ್ ವ್ಯವಸ್ಥೆ ಮತ್ತು ವಿಶಾಲ ಅರ್ಥವ್ಯವಸ್ಥೆ ನಿರ್ವಹಣೆ ಕುರಿತು `ಆರ್ಬಿಐ~ ಸಲಹೆ ನೀಡಿದ್ದು, ಬಜೆಟ್ನಲ್ಲಿ ಇದರ ಫಲಿತಾಂಶಗಳು ಗೋಚರಿಸಲಿವೆ ಎಂದು ಆರ್ಬಿಐ ಗವರ್ನರ್ ಡಿ. ಸುಬ್ಬರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರ್ಥಿಕ ವೃದ್ಧಿ ದರ (ಜಿಡಿಪಿ) ಗಣನೀಯವಾಗಿ ಹೆಚ್ಚಿಸಲು ವಿತ್ತೀಯ ಸೇರ್ಪಡೆ ಜತೆಗೆ ಹೂಡಿಕೆ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಜತೆಗೆ ಹಣದುಬ್ಬರ ನಿಯಂತ್ರಣ ಕ್ರಮಗಳ ಕುರಿತು ಚರ್ಚಿಸಲಾಯಿತು ಎಂದು ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ (ಎಫ್ಎಸ್ಡಿಸಿ) ಅಧ್ಯಕ್ಷ ಯೋಗೇಶ್ ಅಗರ್ವಾಲ್ ಹೇಳಿದ್ದಾರೆ.
ಕಳೆದ ವರ್ಷ ಶೇ 8.4ರಷ್ಟಿದ್ದ `ಜಿಡಿಪಿ~ ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಶೇ 6.9ಕ್ಕೆ ಇಳಿಯುವ ಸಾಧ್ಯತೆ ಇದೆ. ಮಾರ್ಚ್ 16ರಂದು ಪ್ರಣವ್ ಬಜೆಟ್ ಮಂಡಿಸಲಿದ್ದಾರೆ.