ಬೆಂಗಳೂರು: `ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಆರೋಗ್ಯಕರ ಜೀವನಶೈಲಿಗೆ ಪೂರಕವಾಗಿರುವ ಯೋಗಕ್ಕೆ ಉತ್ತೇಜನ ನೀಡಲು ವಿಶೇಷ ಒತ್ತು ನೀಡಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭರವಸೆ ನೀಡಿದರು.
ಆಯುಷ್ ಇಲಾಖೆಯು ಯೋಗ, ಪ್ರಕೃತಿಚಿಕತ್ಸೆ ಮತ್ತು ಆರೋಗ್ಯ ಅಂತರರಾಷ್ಟ್ರೀಯ ಸಮ್ಮೇಳನದ ಪೂರ್ವಸಿದ್ಧತೆಯಾಗಿ ಮಂಗಳವಾರ ಶಾಸಕರ ಭವನದಲ್ಲಿ ಆಯೋಜಿಸಿದ್ದ ಶಾಸಕರ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಮಾತನಾಡಿ, `ವಿಶ್ವದಾದ್ಯಂತ ವೈದ್ಯಕೀಯ ಕ್ಷೇತ್ರಕ್ಕೆ ಸವಾಲೆನಿಸಿರುವ ಎಚ್ಐವಿ ಮತ್ತು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೂ ಯೋಗದಲ್ಲಿ ಪರಿಹಾರವಿದೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ ಎಂದರು.
ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ವ್ಯಾಯಾಮ ಕುರಿತು ಮಾತನಾಡಿದರು. ಯೋಗ ಶಿಬಿರದಲ್ಲಿ ಭಾಗವಹಿಸಿದ ಶಾಸಕರು ಪ್ರಾಣಾಯಾಮ ಮತ್ತಿತರ ಆಸನಗಳನ್ನು ಅಭ್ಯಾಸ ಮಾಡಿದರು. ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯ ನಾಗೇಂದ್ರ ನೇತೃತ್ವದಲ್ಲಿ ಶಿಬಿರ ನಡೆಯಿತು. ಯೋಗಗುರು ಡಾ.ಕೆ.ರಾಘವೇಂದ್ರ ಪೈ ಮತ್ತು ವೇದವ್ಯಾಸ ಯೋಗ ಪ್ರತಿಷ್ಠಾನದವರು ಶಾಸಕರಿಗೆ ತರಬೇತಿ ನೀಡಿದರು.