ಕೃಷ್ಣರಾಜಪೇಟೆ : ಪಟ್ಟಣದ ಲಯನೆಸ್ ಕ್ಲಬ್ ಆಫ್ ಹೇಮಾವತಿ ಸಂಸ್ಥೆಯ ವತಿಯಿಂದ ಗಾಂಧಿ ಜಯಂತಿ ಹಾಗೂ ವಾಲ್ಮೀಕಿ ಜಯಂತಿ ಅಂಗವಾಗಿ ಬಡಮಕ್ಕಳಿಗೆ ಉಚಿತ ಬಟ್ಟೆಗಳು ಹಾಗೂ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಮೈಸೂರು ಮಹಾರಾಜ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಪಿ.ರಂಗಸ್ವಾಮಿ ಸಾಮಗ್ರಿ ವಿತರಣೆ ಮಾಡಿದರು. ಸ್ಥಳೀಯ ಲಯನೆಸ್ ಸಂಸ್ಥೆ ಆರಂಭಗೊಂಡು ಅಲ್ಪ ಕಾಲದಲ್ಲಿ ಉತ್ತಮವಾದ ಕಾರ್ಯಕ್ರಮಗಳನ್ನು ಮಾಡುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಸ್ವಂತ ಕಟ್ಟಡವನ್ನೂ ಹೊಂದಿದ್ದು, ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರಗಳಂತಹ ಉತ್ತಮವಾದ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಇತರರಿಗೆ ಮಾದರಿಯಾಗಿದೆ ಎಂದರು.
ಲಯನೆಸ್ ಸಂಸ್ಥೆ ಅಧ್ಯಕ್ಷೆ ಲಯನೆಸ್ ಗಿರಿಜಾ ನಂಜಪ್ಪಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ವತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಕನ್ಯಾಪಿತೃಗಳನ್ನು ಆರ್ಥಿಕ ಸಂಕ್ಷಟದಿಂದ ಪಾರುಮಾಡಬಹುದಾದ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಲಯನ್ ಸಂಸ್ಥೆಯ ಮೈಸೂರು ವಿಭಾಗೀಯ ಸಂಚಾಲಕ ಭರತೇಶ್, ಸಂಸ್ಥಾಪಕ ಅಧ್ಯಕ್ಷೆ ಲಯನೆಸ್ ರಮಾಮಣಿ ಚಂದ್ರಶೇಖರ್, ಲಯನೆಸ್ ಅನುಸೂಯಾ ಗಂಗಾಧರ್, ಸರ್ವಮಂಗಳ ವೆಂಕಟೇಶ್, ಲಯನೆಸ್ ರಾಧಾ ಈಶ್ವರ ಪ್ರಸಾದ್, ಲಯನೆಸ್ ಶೀಲಾ ಪಾಂಡುರಂಗೇಗೌಡ, ಲಯನೆಸ್ ಸುಚಿತ್ರಾ ಸತೀಶ್ ಮತ್ತಿತರರು ಭಾಗವಹಿಸಿದ್ದರು.