ವಿಜಾಪುರ: `ಶಿಕ್ಷಕರು ಕೇವಲ ವಿದ್ಯೆ ಕಲಿಸಿದರೆ ಸಾಲದು. ವಿದ್ಯಾರ್ಥಿಗಳಿಗೆ ಬದುಕುವ ಕಲೆಯನ್ನೂ ಕಲಿಸಬೇಕು. ನಮ್ಮ ಶಿಕ್ಷಣ ಸಹಾನುಭೂತಿ, ಮಾನವೀಯ ಮೌಲ್ಯಗಳನ್ನು ಒಳಗೊಂ ಡಿರಬೇಕು~ ಎಂದು ಸ್ಥಳೀಯ ಜ್ಞಾನ ಯೋಗಾಶ್ರಮದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಇಲ್ಲಿಯ ಬಸವೇಶ್ವರ ವಿದ್ಯಾ ಸಂಸ್ಥೆಯ ದಿ.ಪ್ರೆಸಿಡೆನ್ಸಿ ಕಾಲೇಜ್ ಆಫ್ ಎಜ್ಯುಕೇಶನ್ (ಬಿ.ಇಡಿ)ನಲ್ಲಿ ಶಿಕ್ಷಕ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕ ಡಾ.ವಿ.ಡಿ. ಐಹೊಳ್ಳಿ, ವಿದ್ಯಾರ್ಥಿಗಳು ಆಶಾವಾದಿಯಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎಂದರು.
ನಿಜಗುಣ ಶಿವಯೋಗಿ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸದಸ್ಯ ಪಿ.ಎಸ್. ಮಂಗಾನವರ, ಕಾಲೇಜಿನ ಪ್ರಾಚಾರ್ಯ ಸಿ.ಎನ್. ಕುನ್ನೂರ, ಶಿಕ್ಷಕ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷೆ ಎಸ್.ಟಿ. ಬೋಳರಡ್ಡಿ, ಪ್ರಧಾನ ಕಾರ್ಯದರ್ಶಿ ಎ.ಜಿ. ಡುಣಗಿ ವೇದಿಕೆಯಲ್ಲಿದ್ದರು.
ಪ್ರಶಿಕ್ಷಣಾರ್ಥಿಗಳಾದ ಕೀರ್ತಿ ಕುಸೂರ, ಶಾರದಾ ಕುಚಬಾಳ, ರೂಪಾ ಕೊಪ್ಪದ ಸ್ವಾಗತ ಗೀತೆ ಹಾಡಿದರು. ಉಪನ್ಯಾಸಕಿ ಕಾವೇರಿ ಜಿ.ಎ. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಬಿ.ಬಿ. ನಂದ್ಯಾಳ ವಂದಿಸಿದರು.
ವಿಎಚ್ಪಿ ಖಂಡನೆ
ವಿಜಾಪುರ: `ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸರು ದಿಟ್ಟ ಕ್ರಮ ಕೈಗೊಂಡಿದ್ದಾರೆ. ಆದರೆ, ಕೆಲವರು ತನಿಖೆಯನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ~ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಮುಖಂಡ ಸಂಗನಗೌಡ ಪಾಟೀಲ ದೂರಿದ್ದಾರೆ.
ಈ ವಿಷಯದಲ್ಲಿ ಎಸ್.ಎಂ. ಪಾಟೀಲ ಗಣಿಹಾರ ನೀಡಿದ ಹೇಳಿಕೆ ಖಂಡನೀಯ. ತನಿಖೆಯ ಮೇಲೆ ಒತ್ತಡ ಹೇರುವ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವ ಕೆಲಸವನ್ನು ಯಾರೂ ಮಾಡಬಾರದು ಎಂದಿದ್ದಾರೆ.
ಪ್ರಮೋದ ಮುತಾಲಿಕರು ಸಂಘದ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರ ಮಾತಿಗೆ ಬೆಲೆ ನೀಡುವ ಅಗತ್ಯವಿಲ್ಲ. ಪೊಲೀಸ್ ಇಲಾಖೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಸಂಗನಗೌಡ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.