ಲಕ್ಷ್ಮೇಶ್ವರ: `ಶಿರಹಟ್ಟಿ ತಾಲ್ಲೂಕಿನಲ್ಲಿ ಈ ಬಾರಿ ಮಳೆರಾಯ ಕೈಕೊಟ್ಟಿದೆ ರೈತರು ಬರಗಾಲದ ಕಪಿಮುಷ್ಠಿಗೆ ಸಿಲುಕಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದ್ದು ಕೂಡಲೇ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಘೋಷಣೆ ಮಾಡಬೇಕು~ ಎಂದು ಪಟ್ಟಣದ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಬಿ.ವಿ. ಪಾಟೀಲ ಕಂದಾಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. `ತಾಲ್ಲೂಕಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಮುಂಗಾರಿನ ಫಸಲು ಒಣಗಿ ಹೋಗಿದೆ. ನಾಡಿಗೆ ಅನ್ನ ನೀಡಬೇಕಾಗಿದ್ದ ರೈತರು ಚಿಂತೆಯಲ್ಲಿ ಮುಳುಗಿದ್ದಾರೆ. ಅಲ್ಲದೆ ತೇವಾಂಶದ ಕೊರತೆಯೋ ಅಥವಾ ಮತ್ತಾವುದು ಕಾರಣವೋ ಬೆಳೆದಿದ್ದ ಬಿಟಿ ಹತ್ತಿಗೆ ಕೆಂಪು ರೋಗ ಉಲ್ಬಣಿಸಿ ಇಳುವರಿಯಲ್ಲಿ ಭಾರಿ ಕುಸಿತವಾಗುವ ಲಕ್ಷಣಗಳು ಕಂಡು ಬರುತ್ತಿವೆ.
ಕಾರಣ ರೈತರು ಆರ್ಥಿಕ ಮುಗ್ಗಟ್ಟಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸರ್ಕಾರ ಶಿರಹಟ್ಟಿ ತಾಲ್ಲೂಕ ಅನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ರೈತರ ಹಿತ ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾರ್ಯಾಗಾರ ಇಂದು
ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವತಿಯಿಂದ `ಪುರಾತತ್ವ ಸ್ಮಾರಕಗಳು ಹಾಗೂ ಅವಶೇಷಗಳ ಅಧಿನಿಯಮ ಕಾಯ್ದೆ~ ಕುರಿತ ಕಾರ್ಯಾಗಾರ ಇದೇ 10ರಂದು ಬೆಳಿಗ್ಗೆ 10 ಗಂಟೆಗೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.