ಬಳ್ಳಾರಿ: ಮಾರಕ ಡೆಂಗೆ ಕಾಯಿಲೆ ಯಿಂದ ನರಳುತ್ತಿದ್ದ ಯುವಕನೊಬ್ಬ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಡೆಂಗೆಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿದೆ.
ಜಿಲ್ಲೆಯ ಸಂಡೂರು ತಾಲ್ಲೂಕಿನ ಲಕ್ಷ್ಮಿಪುರ ನಿವಾಸಿ ಕೆಂಚಮ್ಮ ಅವರ ಪುತ್ರ ಶಿವಕುಮಾರ್ (22) ಮೃತಪಟ್ಟಿದ್ದಾನೆ.
20 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಈ ಯುವಕನನ್ನು ಚಿಕಿತ್ಸೆಗಾಗಿ ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಿವಕುಮಾರ್ ಗುಣಮುಖವಾಗದ ಹಿನ್ನೆಲೆಯಲ್ಲಿ ಅವರನ್ನು ಕಳೆದ ವಾರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈತ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಬೆಳಿಗ್ಗೆ ಮೃತಪಟ್ಟ.
ಬಳ್ಳಾರಿ ನಗರದ ವಿಶ್ವೇಶ್ವರಯ್ಯ ನಗರದ ಒಂದೇ ಕುಟುಂಬದ ಇಬ್ಬರು ಹಾಗೂ ತಾಲ್ಲೂಕಿನ ಹೊಸ ಯರಗುಡಿ ಗ್ರಾಮದಲ್ಲಿ ಒಬ್ಬ ಹೆಣ್ಣುಮಗಳು ಶಂಕಿತ ಡೆಂಗೆಯಿಂದ ಮೃತಪಟ್ಟಿರುವ ಘಟನೆ ಭಾನುವಾರವಷ್ಟೇ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.