ನವದೆಹಲಿ (ಪಿಟಿಐ): `ಡಿಸೆಂಬರ್ 16ರಂದು ಬಸ್ನಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರದ ಸಂದರ್ಭದಲ್ಲಿ ನಾವು ಇರಲಿಲ್ಲ' ಎಂದು ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳು ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು.
`ನಾನು ಮತ್ತು ಪವನ್ ಗುಪ್ತಾ (ಪ್ರಕರಣದ ಇನ್ನೊಬ್ಬ ಆರೋಪಿ) ಘಟನೆ ನಡೆದ ವೇಳೆ ಬಸ್ನಲ್ಲಿ ಇರಲಿಲ್ಲ' ಎಂದು ಆರೋಪಿ ವಿನಯ್ ಶರ್ಮಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾನೆ.
`ಪ್ರಕರಣದಲ್ಲಿ ನನ್ನನ್ನು ತಪ್ಪಾಗಿ ಬಿಂಬಿಸಲಾಗಿದೆ' ಎಂದು ತನ್ನ ಪರ ವಕೀಲ ಎ.ಪಿ.ಸಿಂಗ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾನೆ.
`ಘಟನೆ ನಡೆದ ಡಿಸೆಂಬರ್ 16ರ ರಾತ್ರಿ ದಕ್ಷಿಣ ದೆಹಲಿಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ನಾನು ಮತ್ತು ಪವನ್ ಪಾಲ್ಗೊಂಡ್ದ್ದಿದೆವು. ಈ ಬಗ್ಗೆ ನನ್ನ ಮೊಬೈಲ್ನಲ್ಲಿ ಚಿತ್ರಗಳು ಮತ್ತು ವಿಡಿಯೊ ದೃಶ್ಯಾವಳಿ ಇವೆ' ಎಂದು ವಿನಯ್ ಮಾಹಿತಿ ನೀಡಿರುವುದಾಗಿ ವಕೀಲ ಸಿಂಗ್, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಯೋಗೇಶ್ ಖನ್ನಾ ಅವರ ಗಮನಕ್ಕೆ ತಂದರು.
`ಆರೋಪಿಗಳ ರಕ್ಷಣೆಗೆ ಇದು ಬಹಳ ಮಹತ್ವದ್ದು. ಮೊಬೈಲ್ನಲ್ಲಿ ಕೆಲ ಪ್ರಮುಖ ಅಂಶಗಳಿವೆ. ಇದರಿಂದ ನನ್ನ ಕಕ್ಷೀದಾರ ಮುಗ್ಧ ಎಂದು ಸಾಬೀತು ಮಾಡಬಹುದು' ಎಂದು ವಕೀಲ ಸಿಂಗ್ ತಿಳಿಸಿದರು.
ಆರೋಪಿ ವಿನಯ್ ಬಂಧನದ ಬಳಿಕ ಆತನ ಮೊಬೈಲ್ ಪೊಲೀಸರ ವಶದಲ್ಲಿದೆ.