ಢಾಕಾ (ಐಎಎನ್ಎಸ್): ಗಡಿ ದಾಟುವ ಬಾಂಗ್ಲಾದೇಶದ ನಾಗರಿಕರ ಮೇಲೆ ನಮ್ಮ ಗಡಿ ಭದ್ರತಾ ಪಡೆಗಳು (ಬಿಎಸ್ಎಫ್) ಇನ್ನು ಮುಂದೆ ಗುಂಡು ಹಾರಿಸುವುದಿಲ್ಲ ಎಂದು ಭಾರತ ಮತ್ತೊಮ್ಮೆ ಪುನರುಚ್ಚರಿಸಿದೆ.ಭೂತಾನ್ ರಾಜಧಾನಿ ಥಿಂಪುವಿನಲ್ಲಿ ನಡೆದ ಎರಡು ದಿನಗಳ ಸಾರ್ಕ್ ವಿದೇಶ ಸಚಿವರ ಸಭೆಯಲ್ಲಿ ಭಾಗವಹಿಸಿದ್ದ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಬಾಂಗ್ಲಾದೇಶದ ವಿದೇಶಾಂಗ ಸಚಿವರಾದ ದೀಪು ಮೋನಿ ಅವರಿಗೆ ಈ ಭರವಸೆ ನೀಡಿದ್ದಾರೆ.
ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭಾರತ ತಿಳಿಸಿರುವುದಾಗಿ ಬಾಂಗ್ಲಾದ ಅಧಿಕೃತ ಸುದ್ದಿಸಂಸ್ಥೆ ‘ಬಾಂಗ್ಲಾದೇಶ್ ಸಂಗ್ಬಾದ್ ಸಂಗಸ್ಥ (ಬಿಎಸ್ಎಸ್) ಮಂಗಳವಾರ ವರದಿ ಪ್ರಕಟಿಸಿದೆ.ಕಳೆದ ತಿಂಗಳು ಇಲ್ಲಿ ನಡೆದ ಗೃಹ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಜ. 7ರಂದು ತನ್ನ ಕುಟುಂಬದೊಂದಿಗೆ ಗಡಿ ದಾಟುತ್ತಿದ್ದ ಫೆಲಾನಿ ಎಂಬ ಅಪ್ರಾಪ್ತ ಬಾಲಕಿಯು ಬಿಎಸ್ಎಫ್ ಗುಂಡೇಟಿಗೆ ಬಲಿಯಾದ ಘಟನೆ ಬಗ್ಗೆ ಭಾರತ ದಿಗ್ಭ್ರಮೆ ವ್ಯಕ್ತಪಡಿಸಿತ್ತು. ಕುಟುಂಬವು ದೆಹಲಿಯಿಂದ ಹಿಂತಿರುಗುತ್ತಿದ್ದಾಗ ಈಶಾನ್ಯ ಬಾಂಗ್ಲಾದ ಕುರಿಗ್ರಾಮ್ ಬಳಿ ಗಡಿಯಲ್ಲಿ ಈ ದುರ್ಘಟನೆ ನಡೆದಿತ್ತು.ಇದರ ವಿರುದ್ಧ ಬಾಂಗ್ಲಾ ರಾಜಕೀಯ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ್ದವು.