ಕಮಲನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರ ಪರ ಮಾತ್ರ ಹೋರಾಡಲಿಲ್ಲ. ಸಮಾಜದ ಎಲ್ಲ ಶೋಷಿತ ವರ್ಗದವರ ಪರ ಹೋರಾಡಿ, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸಿಕೊಟ್ಟ ಕ್ರಾಂತಿಕಾರಿ ಪುರುಷರಾಗಿದ್ದರು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ನೀಲಕಂಠರಾವ್ ಕಾಂಬಳೆ ಹೇಳಿದರು.
ಇಲ್ಲಿನ ಭೀಮನಗರ ಬಡಾವಣೆಯ ಅಂಬೇಡ್ಕರ್ ಭವನ ಆವರಣದಲ್ಲಿ ಭಾನುವಾರ ಡಾ. ಬಿ.ಆರ್.ಅಂಬೇಡ್ಕರ್ ಅವರ 122ನೇ ಜಯಂತಿ ನಿಮಿತ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಗಾಗಿದ್ದ ಸರ್ಕಲ್ ಇನ್ಸ್ಪೆಕ್ಟರ್ ಬಿ.ಪಿ.ಚಂದ್ರಶೇಖರ್ ಮಾತನಾಡಿ, ಅಂಬೇಡ್ಕರ್ ಅವರು ಸಮಾಜದಲ್ಲಿನ ದೀನ ದಲಿತರ ಮತ್ತು ಹಿಂದುಳಿದವರಿಗೆ ವಿಶೇಷ ಮೀಸಲಾತಿ ಕಲ್ಪಿಸುವುದರ ಮೂಲಕ ಸಮಾನತೆಯ ಹರಿಕಾರ ಎನಿಸಿಕೊಂಡಿದ್ದಾರೆ. ಶೋಷಿತ ವರ್ಗದವರಿಗೆ ಮಾಡಿದ ತ್ಯಾಗ, ಬಲಿದಾನ, ಹೋರಾಟಗಳು ಹಾಗೂ ಅವರ ಆಶಯ ವಿಚಾರಧಾರೆ, ತತ್ವಾದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ ಎಂದರು.
ಡಾ.ಚನ್ನಬಸವ ಪಟ್ಟದ್ಧೇವರು ಪ್ರೌಢ ಶಾಲೆ: ಇಲ್ಲಿನ ಹಿರೇಮಠ ಸಂಸ್ಥಾನ ವಿದ್ಯಾಪೀಠ ಸಂಚಾಲಿತ ಡಾ. ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಜೀವಿ ಸುಧಾಕರ್ ಬಾದಾಮಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ಸಮಾಜದಲ್ಲಿನ ದೀನ ದಲಿತರ ಮತ್ತು ಹಿಂದುಳಿದವರಿಗೆ ವಿಶೇಷ ಮೀಸಲಾತಿ ಕಲ್ಪಿಸುವುದರ ಮೂಲಕ ಸಮಾನತೆಯ ಹರಿಕಾರ ಎನಿಸಿಕೊಂಡಿದ್ದಾರೆ. ಶೋಷಿತ ವರ್ಗದವರಿಗೆ ಮಾಡಿದ ತ್ಯಾಗ, ಬಲಿದಾನ, ಹೋರಾಟಗಳು ಹಾಗೂ ಅವರ ಆಶಯ ವಿಚಾರಧಾರೆ, ತತ್ವಾದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ ಎಂದರು.
ಶಿಕ್ಷಕ ಮಲ್ಲಿನಾಥ ಶಿವಪುರೆ, ಚನ್ನಬಸವ ಘಾಳೆ ಇದ್ದರು.
ಖತಗಾಂವ: ಸಮೀಪದ ಖತಗಾಂವ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಗುರು ಸುಭಾಷ ಬಿರಾದಾರ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಸಿಬ್ಬಂದಿ ಸೂರ್ಯಕಾಂತ ಮಹಾಜನ್, ಇಂದ್ರಜೀತ ಗವಳಿ, ಮಲ್ಲಮ್ಮಾ ಕಸ್ತೂರೆ, ಇಂದಿರಾಬಾಯಿ ಕಾಂಬಳೆ ಇತರರು ಉಪಸ್ಥಿತರಿದ್ದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ, ಹಿಮ್ಮತ್ನಗರ, ವಿಶ್ವಾಸನಗರ, ಸೇರಿದಂತೆ ವಿವಿಧೆಡೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯುತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.