ಜಾವಗಲ್: ರಾಜ್ಯದ ವಿವಿಧೆಡೆ ಕಳೆದ ಮೂರು ದಿನಗಳಿಂದ ಉತ್ತಮ ಮಳೆ ಸುರಿದ್ದರೂ ಮಳೆಯಾಶ್ರಿತ ಹೋಬಳಿಯ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ.
ಹೋಬಳಿ ಸಂಪೂರ್ಣ ಬಯಲು ಸೀಮೆಯ ಪ್ರದೇಶ. ಈ ವರ್ಷ ಮುಂಗಾರು- ಹಿಂಗಾರು ಮಳೆ ಕೈಕೊಟ್ಟು ವಾಣಿಜ್ಯ ಬೆಳೆ ಬೆಳೆಗಾರರು ಆತಂಕಗೊಂಡಿದ್ದಾರೆ. ಸೂರ್ಯಕಾಂತಿ, ಎಳ್ಳು, ಜೋಳ ನೆಲ ಕಚ್ಚಿವೆ. ರಾಗಿ ಬಿಸಿಲಿನ ಝಳಕ್ಕೆ ಸಂಪೂರ್ಣ ಬಾಡುತ್ತಿವೆ. ಭೂಮಿ ತೇವಾಂಶ ಕುಸಿದು ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ.
ವಾರದೊಳಗೆ ಮಳೆಯಾಗದಿದ್ದರೆ ಬಿತ್ತನೆಯಾಗಿರುವ ರಾಗಿ, ಹುರುಳಿ, ಹತ್ತಿ ಸಂಪೂರ್ಣ ಬಾಡುವ ಸಾಧ್ಯತೆ ಹೆಚ್ಚು. ಆಗ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ.
ಈ ಭಾಗಕ್ಕೆ ಸರಿಯಾದ ಸಮಯಕ್ಕೆ ಮಳೆಯಾಗುತ್ತಿಲ್ಲ. ಪ್ರತಿ ಬಾರಿ ರೈತರು ಮಳೆಗಾಗಿ ಕಾದು ಕೊನೆಗೆ ನಷ್ಟ ಅನುಭವಿಸುವಂತಾಗಿದೆ. ಬರದ ಛಾಯೆಯಲ್ಲೇ ಬದುಕುತ್ತಿರುವ ರೈತರಿಗೆ ಈ ವರ್ಷವೂ ಬೆಳೆ ನಷ್ಟದ ಭೀತಿ ಆವರಿಸಿದೆ.
ಈ ಭಾಗದ ಕೆರೆಕಟ್ಟೆಗಳು ಬತ್ತಿ ಅಂತರ್ಜಲ ಕುಸಿದಿದೆ. ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಮಳೆ ಕೈಕೊಟ್ಟಿದ್ದರಿಂದ ರೈತ ಸಾಲದ ಚಿಂತೆಯಲ್ಲಿ ಮುಳುಗಿದ್ದಾರೆ. ಮಳೆಗಾಗಿ ಜಪಿಸುತ್ತಿರುವ ರೈತರು ಆಕಾಶದತ್ತ ಮುಖ ಮಾಡಿದ್ದಾರೆ.
ಹಸಿರಿನಿಂದ ಕಂಗೊಳಿಸಬೇಕಿದ್ದ ಭೂಮಿ ಬರಿದಾಗಿದೆ. ಜಾನುವಾರುಗಳು ಮೇವಿಲ್ಲದೆ ಪರದಾಡುವಂತಾಗಿದೆ. ಇದೇ ಸ್ಥಿತಿ ಮುಂದುವರಿದರೆ ಕುಡಿ ಯುವ ನೀರಿಗೂ ಬರ ಬರಬಹುದು.